ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ. 17 ರಷ್ಟು ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಣೆ ಮಾಡಿದ್ದಾರೆ.
ಇಂದಿನಿಂದ ರಾಜ್ಯದಾದ್ಯಂತ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಕಛೇರಿಗಳಿಗೆ ಗೈರುಹಾಜರಾಗಿ ಮುಷ್ಕರಕ್ಕೆ ಮುಂದಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಈ ಘೋಷಣೆ ಮಾಡಿದ್ದಾರೆ.
7ನೆ ವೇತನ ಆಯೋಗದ ವರದಿ ಜಾರಿ ಮತ್ತು ಹಳೇಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಕರೆಯ ಮೇರೆಗೆ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರು.
ಇದರಿಂದ ರಾಜ್ಯದಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ಎದುರಾಗಿತ್ತು. ಶಾಲಾ ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗೆ ನೌಕರರು ಗೈರು ಹಾಜರಾಗದೇ ಇದ್ದುದ್ದಿರಿಂದ ವಿದ್ಯಾರ್ಥಿಗಳ ಪರೀಕ್ಷೆಗೆ ಮತ್ತು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆ ಇಲ್ಲದೇ ಪರದಾಡಿದರು. ನೌಕರರ ಮುಷ್ಕರದ ಹಿನ್ನಲೆಯಲ್ಲಿ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆ ಮತ್ತು ಮಂಗಳೂರು ವಿ.ವಿ. ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
ಸರ್ಕಾರದ ಸಂದಾನಕ್ಕೆ ನೌಕರರ ಸಂಘ ಜಗ್ಗದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಇದೀಗ ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಮುಂದಾಗಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎನ್.ಪಿ.ಎಸ್. ಬಗ್ಗೆ ಬೇರೆ ರಾಜ್ಯಗಳಲ್ಲಿ ಏನಾಗಿದೆ ಎಂದು ಎರಡು ತಿಂಗಳಲ್ಲಿ ವರದಿ ತರಿಸಿಕೊಳ್ಳುತ್ತೇವೆ. ಈಗ ಶೇ. 17ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ. ಸರ್ಕಾರಿ ನೌಕರರ ಜೊತೆ ಸೌಹಾರ್ದಯುತವಾಗಿ ಸಭೆ ನಡೆದಿದ್ದು, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದ್ದಾರೆ.
ಸರ್ಕಾರಿ ನೌಕರರ ಎರಡು ಬೇಡಿಕೆಗಳಲ್ಲಿ ಒಂದು ಬೇಡಿಕೆಯನ್ನು ಈಡೇರಿಸಿ ಮತ್ತೊಂದು ಬೇಡಿಕೆ ಪರಿಶೀಲನೆಗೆ ಸಮಿತಿ ರಚಿಸಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ನಂತರ ಸರ್ಕಾರಿ ನೌಕರರ ಸಂಘ ಮುಷ್ಕರ ವಾಪಾಸ್ಸು ಪಡೆಯಲು ಮುಂದಾಗಿದ್ದಾರೆ.
ಈ ನಡುವೆ ಸರ್ಕಾರಿ ನೌಕರರ ನಡುವೆ ಬಿರುಕು ಮೂಡಿದ್ದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ ಷಡಕ್ಷರಿ ಅವರ ನಿರ್ಧಾರಕ್ಕೆ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಷಡಕ್ಷರಿಯವರು ಹೋರಾಟವನ್ನು ಸಮರ್ಥವಾಗಿ ಮುನ್ನಡೆಸಿಲ್ಲ. ಆತುರದ ನಿರ್ಧಾರ ಕೈಗೊಂಡು ಮುಷ್ಕರ ಹಿಂದಕ್ಕೆ ಪಡೆದಿದ್ದಾರೆ. ಕನಿಷ್ಟ ಶೇಕಡಾ 25 ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಬಹುದಿತ್ತು ಎಂದು ಹೇಳಿದ್ದಾರೆ.
ನಿರಂತರ ಸುದ್ದಿಗಳಿಗಾಗಿ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/DDXjmfQaBa0HJQqmKf7y89
*****