ವಿದ್ಯುತ್ ತಂತಿಗಳು ಗಾಳಿಗೆ ತೂರಾಡಿ ಒಂದಕ್ಕೊಂದು ತಾಗಿದ ಪರಿಣಾಮ ಉಂಟಾದ ಬೆಂಕಿಯ ಕಿಡಿತಾಗಿ ಕಾಫಿ ತೋಟ ಭಸ್ಮವಾದ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲ್ಲೂಕು ಮೈಲಿಮನೆ ಸಮೀಪದ ಕೇಸರಿಕೆ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದ್ದು ಬೆಂಕಿಯ ಕೆನ್ನಾಲಿಗೆಗೆ ಸುಮಾರು 6 ಎಕರೆ ಅರೇಬಿಕ ಕಾಫಿ ತೋಟ ಸುಟ್ಟು ಭಸ್ಮವಾಗಿದೆ.
ಗ್ರಾಮದ ಶ್ರೀಧರ್ ಶೆಟ್ಟಿ, ಮಂಜುನಾಥ್ ಶೆಟ್ಟಿ, ಗೌರಪ್ಪ, ಲಕ್ಷ್ಮಣ್ ಎಂಬುವವರಿಗೆ ಸೇರಿದ ಕಾಫಿತೋಟಗಳು ಸಂಪೂರ್ಣ ನಾಶವಾಗಿದೆ. ಎಲ್ಲರೂ ಸಣ್ಣ ಬೆಳೆಗಾರರಾಗಿದ್ದು ಒಂದು ಎರಡು ಎಕರೆ ಹಿಡಿವಳಿ ಹೊಂದಿ ಅದರಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದರು. ಇದೀಗ ಅವರ ತೋಟದ ಕಾಫಿ ಗಿಡಗಳು, ಕಾಳುಮೆಣಸು ಬಳ್ಳಿಗಳು, ಇತರೆ ಮರಗಳು ಎಲ್ಲಾ ಸುಟ್ಟುಕರಕಲಾಗಿ ನಿಂತಿರುವ ದೃಶ್ಯ ಕಂಡು ದಿಕ್ಕುತೋಚದಂತಾಗಿದ್ದಾರೆ. ಕಷ್ಟಪಟ್ಟು ಸಾಗುವಳಿ ಮಾಡಿದ್ದ ತೋಟ ಕಣ್ಣೆದುರೆ ಕರಕಲಾಗಿದ್ದು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿಯರು ಭೇಟಿ ನೀಡಿ ನೊಂದ ರೈತರಿಗೆ ಸಾಂತ್ವಾನ ಹೇಳಿದ್ದಾರೆ. ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಕರೆಮಾಡಿ ನಷ್ಟಹೊಂದಿದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ನಿರಂತರ ಸುದ್ದಿಗಳಿಗಾಗಿ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/DDXjmfQaBa0HJQqmKf7y89