ಬಿಜೆಪಿ ಆಡಳಿತಕ್ಕೆ ಬಂದ ನಂತರ ಬೆಲೆ ಏರಿಕೆಯಿಂದಾಗಿ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಜೀವನ ಸುಗಮಗೊಳಿಸಲು ವಿವಿಧ ಯೋಜನೆಯ ಕಾಂಗ್ರೆಸ್ ಗ್ಯಾರಂಟಿ ಕಾರ್ಡನ್ನು ರಾಜ್ಯದ ಎಲ್ಲಾ ಕುಟುಂಬಕ್ಕೆ ವಿತರಿಸಲಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಮಹಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ ಹೇಳಿದರು.
ಅವರು ಶನಿವಾರ ಮೂಡಿಗೆರೆ ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ದುರಾಡಳಿತದಿಂದ ಜನಸಾಮಾನ್ಯರು ಬದುಕದಂತಹ ಪರಿಸ್ಥಿತಿ ಉಂಟಾಗಿದೆ. ಇದನ್ನು ಮನಗಂಡು ಬೆಲೆ ಏರಿಕೆ ಸರಿದೂಗಿಸಲು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಎಲ್ಲಾ ಬಿಪಿಎಲ್ ಮತ್ತು ಎಪಿಎಲ್ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ, ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಮತ್ತು 10 ಕೇಜಿ ಅಕ್ಕಿ ನೀಡಲು ತೀರ್ಮಾನಿಸಿದ್ದಾರೆ. ಇದು ಕೇವಲ ಭರವಸೆ ಮಾತ್ರವಲ್ಲ. ಅದಕ್ಕಾಗಿ ಗ್ಯಾರಂಟಿ ಕಾರ್ಡ್ ಕೂಡ ವಿತರಿಸಲಾಗುತ್ತದೆ.
ಈ ಕಾರ್ಡನ್ನು ಜಿಲ್ಲೆಯಲ್ಲಿ ಪ್ರಥಮವಾಗಿ ಮೂಡಿಗೆರೆ ತಾಲೂಕಿನಲ್ಲಿ ಮಾಜಿ ಸಚಿವೆ ಮೋಟಮ್ಮ ಅವರ ನೇತೃತ್ವದಲ್ಲಿ ಇಂದು ವಿತರಿಸಲು ಪ್ರಾರಂಭಿಸಲಾಗಿದ್ದು, ಪ್ರತಿ ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರ ಮೂಲಕ ಪ್ರತಿ ಮನೆಗೆ ಕಾರ್ಡ್ ತಲುಪಿಸಲಾಗುವುದು ಎಂದು ಹೇಳಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಇಂದಿರಾಗಾಂಧಿ, ರಾಜೀವ್ಗಾಂಧಿ ಅವರ ಜನಪರ ಯೋಜನೆಗಳೆಲ್ಲವೂ ಕಾರ್ಯರೂಪಕ್ಕೆ ತರಲಾಗಿದೆ. ಅಲ್ಲದೇ ರಾಜ್ಯದಲ್ಲೂ ಕೂಡ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲಾ ಜನಪರ ಯೋಜನೆ ಶೇ.100ರಷ್ಟು ಜನರಿಗೆ ತಲುಪಿಸಲಾಗಿದೆ. ಆದರೆ ಬಿಜೆಪಿಯವರು ಬೆಲೆ ಏರಿಕೆ, ದುಬಾರಿ ಟ್ಯಾಕ್ಸ್ ಹಾಕಿದ್ದು ಬಿಟ್ಟರೆ ಜನರ ಬದುಕಿಗೆ ಸಂಬಂಧಿಸಿದ ಒಂದೇ ಒಂದು ಜನಪರ ಯೋಜನೆ ಕಾರ್ಯರೂಪಕ್ಕೆ ತರಲು ಇಂದಿಗೂ ಸಾಧ್ಯವಾಗಿಲ್ಲ. ಸುಳ್ಳು ಹೇಳಿಕೊಂಡು, ಜನರ ಬದುಕಿಗೆ ಸಂಬಂಧಿಸದ ಯಾವುದೋ ವಿಚಾರವನ್ನಿಟ್ಟುಕೊಂಡು ದಾರಿ ತಪ್ಪಿಸುವುದರಲ್ಲೇ ಕಾಲ ಕಳೆದಿದ್ದಾರೆ. ಇದು ಜನರಿಗೆ ಅರ್ಥವಾಗಿದ್ದು ಎಲ್ಲೆಡೆ ಕಾಂಗ್ರೆಸ್ ಮೇಲೆ ಒಲವು ತೋರಿಸುತ್ತಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಎಂ .ಎಸ್.ಅನಂತ್, ಮರಗುಂದ ಪ್ರಸನ್ನ, ಎಚ್.ಆರ್.ಸಂಪತ್ಕುಮಾರ್, ಹಳೇಕೆರೆ ಚಂದ್ರು, ಸೋಮೇಗೌಡ ಕೆ.ಆರ್.ಪೇಟೆ, ಈರಯ್ಯ ಬಾಚಿಗನಹಳ್ಳಿ ಉಪಸ್ಥಿತರಿದ್ದರು.