ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲ್ಲೂಕಿನಲ್ಲಿ ಚಿರತೆಯೊಂದು ಅನುಮಾನಸ್ಪದವಾಗಿ ಸಾವನ್ನಪ್ಪಿದೆ. ಸಾವನ್ನಪ್ಪಿದ ಚಿರತೆಯ ಉಗುರು ಕಿತ್ತ ಮೂವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿರುವ ಪ್ರಕರಣ ನಡೆದಿದೆ.
ಎನ್.ಆರ್.ಪುರ ತಾಲೂಕಿನ ರಾವೂರು ಮೀನುಕ್ಯಾಂಪಿನ ಭದ್ರಾ ಹಿನ್ನೀರಿನಲ್ಲಿ ಸತ್ತ ಚಿರತೆ ಪತ್ತೆಯಾಗಿದ್ದು ಈ ಸಂಬಂಧ ಕ್ಯಾಂಪಿನ 3 ಜನ ಆರೋಪಿಗಳನ್ನು ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿಗಳು ಬುಧವಾರ ಸಂಜೆ ಬಂಧಿಸಿದ್ದಾರೆ.
ಘಟನೆಯ ವಿವರ: ಕಳೆದ ಭಾನುವಾರ ಮದ್ಯಾಹ್ನ ರಾವೂರು ಮೀನುಕ್ಯಾಂಪಿನ ಸಮೀಪದ ಭದ್ರಾ ಹಿನ್ನೀರಿ ನಲ್ಲಿ ಸತ್ತ ಚಿರತೆಯೊಂದು ತೇಲಿ ಬಂದ ಬಗ್ಗೆ ಭದ್ರಾ ವೈಡ್ ಲೈಪ್ ಸಿಬ್ಬಂದಿ ಮಾಹಿತಿ ನೀಡಿದ್ದರು.
ತಕ್ಷಣ ಕಾರ್ಯ ಪ್ರವತ್ತರಾದ ನರಸಿಂಹರಾಜಪುರ ಉಪ ಅರಣ್ಯಾಧಿಕಾರಿ ಅರುಣ ಬಾರಂಗಿ, ಗಸ್ತು ವನಪಾಲಕ ಪ್ರವೀಣ್ ಹಾಗೂ ಇತರ ಸಿಬ್ಬಂದಿ ಸತ್ತ ಚಿರತೆಯನ್ನು ವಶ ಪಡಿಸಿಕೊಂಡಿದ್ದಾರೆ. ಸತ್ತ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸಿದಾಗ ಚಿರತೆಯ ಉಗುರು ಕಿತ್ತಿರುವುದು ಬೆಳಕಿಗೆ ಬಂದಿದೆ.
ಕೊಪ್ಪ ಡಿಎಫ್ಓ ನಿಲೇಶ್ ಸಿಂದೆ ದೇವಬಾ, ಕೊಪ್ಪ ವಲಯ ಎಸಿಎಫ್ ಮಂಜುನಾಥ್ ಮಾರ್ಗದರ್ಶನದಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಸಂತೋಷ್ ಸಾಗರ್, ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿ ಸಚಿನ್ ತನಿಖೆ ನಡೆಸಿ ಚಿರತೆಯ ಪೋಸ್ಟ್ ಮಾರ್ಟಂ ಮಾಡಲಾಯಿತು.ಭದ್ರಾ ವೈಲ್ಡ್ಲೈಪ್ನ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದರು.
3 ಆರೋಪಿಗಳ ಬಂಧನ: ಚಿರತೆಯ ಉಗುರು ಕಿತ್ತ ಬಗ್ಗೆ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿಗಳು ತನಿಖೆ ನಡೆಸಿ ಬುಧವಾರ ಸಂಜೆ ಆರೋಪಿಗಳಾದ ಮೀನುಕ್ಯಾಂಪಿನ ವಿವೇಕ, ಸಚಿನ್, ಮಂಜುನಾಥ್ ಅವರನ್ನು ಬಂಧಿಸಿದ್ದಾರೆ. ತನಿಖೆ ನಡೆಸಿದಾಗ ಚಿರತೆ ಉಗುರು ಕಿತ್ತಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಚಿರತೆ ಉಗುರು ಸಹ ಸಿಕ್ಕಿದೆ. ಆದರೆ, ಚಿರತೆಯನ್ನು ಆರೋಪಿಗಳೇ ಸಾಯಿಸಿದ್ದಾರೆಯೇ ? ಎಂಬುದು ಖಚಿತವಾಗಿಲ್ಲ. ಅರಣ್ಯಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.