ಜಮ್ಮು ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಇತ್ತೀಚೆಗೆ ನಡೆದ ಖೇಲೋ ಇಂಡಿಯಾ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ನಮ್ಮ ಚಿಕ್ಕಮಗಳೂರು ಕ್ರೀಡಾಪಟುಗಳು ಕಮಾಲ್ ಮಾಡಿದ್ದಾರೆ.
ಕ್ರೀಡಾಕೂಟದ ಕರ್ಲಿಂಗ್ ಮತ್ತು ಐಸ್ ಸ್ಟಾಕ್ ವಿಭಾಗದಲ್ಲಿ ಜಿಲ್ಲೆಯ 11 ಮಂದಿ ವಿದ್ಯಾರ್ಥಿಗಳು ಪದಕ ಗೆದ್ದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಕರ್ಲಿಂಗ್ಸ್ ಸೀನಿಯರ್ ಡಬಲ್ಸ್ ವಿಭಾಗದಲ್ಲಿ ಕರ್ನಾಟಕ ತಂಡ ಚಿನ್ನ ಪಡೆದಿದ್ದು ಚಿಕ್ಕಮಗಳೂರಿನ ಅಶ್ವಿನಿ ಅವರು ಆ ತಂಡದ ಸದಸ್ಯರಾಗಿದ್ದರು. ಕರ್ಲಿಂಗ್ ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡ ಚಿನ್ನ ಗೆದ್ದಿದ್ದು ಆ ತಂಡದಲ್ಲಿ ನಗರದ ಶ್ರೀಶಾ ಎಂ. ದೇವಾಂಗ್, ಸಂಪ್ರೀತ, ಪೂರ್ವಿಕಾ ಜೆ.ಅರಸ್ ಪದಕ ಪಡೆದಿದ್ದಾರೆ. ಕರ್ಲಿಂಗ್ ಜೂನಿಯರ್ ಮಿಕ್ಸಡ್ ವಿಭಾಗದಲ್ಲಿ ತೋಷಿಣಿ ಮತ್ತು ಸ್ಟೀಪನ್ ಅವರು ಕಂಚಿನ ಪದಕ ಗೆದ್ದಿದ್ದಾರೆ.
ಐಸ್ ಸ್ಟಾಕ್ ವಿಭಾಗದಲ್ಲಿ ಕರ್ನಾಟಕ ತಂಡ ಕಂಚಿನ ಪದಕ ಪಡೆದಿದ್ದು ನಗರದ ಬಿ.ಆರ್. ಯಶವಂತ್, ಸುಶೀಲ್ ಕುಮಾರ್, ಋತಿಕ್ ಪದಕ ಪಡೆದಿದ್ದಾರೆ. ಐಸ್ ಸ್ಟಾಕ್ ಟೀಮ್ ಈವೆಂಟ್ ವಿಭಾಗದಲ್ಲಿ ಕವಿತಾ ಅವರು ಕಂಚಿನ ಪದಕ ಪಡೆದಿದ್ದಾರೆ.
ಪದಕ ವಿಜೇತ ಕ್ರೀಡಾಪಟಗಳು, ತರಬೇತುದಾರರು ಮತ್ತು ಪೋಷಕರನ್ನು ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಎಸ್ಪಿ ಉಮಾಪ್ರಶಾಂತ್ ತಮ್ಮ ಕಛೇರಿಗಳಿಗೆ ಆಹ್ವಾನಿಸಿ ಅಭಿನಂದಿಸಿದ್ದಾರೆ.
ರಾಷ್ಟ್ರಮಟ್ಟದ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಚಿಕ್ಕಮಗಳೂರು ನಗರದ ವಿವೇಕಾನಂದ ಫಿಟ್ನೆಸ್ ಅಕಾಡೆಮಿಯ ಗಿರೀಶ್ ಮತ್ತು ಕರ್ನಾಟಕ ವಿಂಟರ್ ಗೇಮ್ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ ರಜಾಕ್ ತರಬೇತಿ ನೀಡಿದ್ದರು.
ವಿವೇಕಾನಂದ ಫಿಟ್ನೆಸ್ ಅಕಾಡೆಮಿಯ ಗಿರೀಶ್ ಅವರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಳೆದ ಹಲವು ವರ್ಷಗಳಿಂದ ಕರಾಟೆ, ಕರ್ಲಿಂಗ್ ಸೇರಿದಂತೆ ಫಿಟ್ನೆಸ್ ಕ್ರೀಡೆಗಳ ತರಬೇತಿ ನೀಡುತ್ತಾ ನೂರಾರು ವಿದ್ಯಾರ್ಥಿಗಳಿಗೆ, ಯುವಜನರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ.