ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಳಗೊಂಡಿದೆ. ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಂಡಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ನಿನ್ನೆ ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಬಿಜೆಪಿ ಆಯೋಜಿಸಿದ್ದ ವೃತ್ತಿಪರ ಮತ್ತು ಚಿಂತಕರ ಸಭೆಯಲ್ಲಿ ಮಾತನಾಡಿದರು.
ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿ ಶಾರದಾಂಬೆ ದರ್ಶನ ಪಡೆದಿದ್ದರಿಂದ ಸೌಭಾಗ್ಯ ಪ್ರಾಪ್ತಿಯಾಗಿದೆ. ದತ್ತಪೀಠಕ್ಕೆ ನಮಸ್ಕರಿಸುವ ಮೂಲಕ ಮಾತು ಆರಂಭಿಸುತ್ತೇನೆ ಎಂದು ಮಾತು ಆರಂಭಿಸಿದರು. ಅರಣ್ಯ, ಗಿರಿಶಿಖರಗಳನ್ನ ಹೊಂದಿರುವ ಈ ಜಿಲ್ಲೆ ಉತ್ತಮ ಪರಿಸರ ಹೊಂದಿದೆ. ತುಂಗಾ-ಭದ್ರಾ-ವೇದಾವತಿ-ಯಗಚಿ-ಹೇಮಾವತಿ ನದಿಗಳ ಉಗಮಸ್ಥಾನವಾಗಿದೆ ಎಂದು ಜಿಲ್ಲೆಯ ಸೌಂದರ್ಯವನ್ನ ಬಣ್ಣಿಸಿದರು.
9 ವರ್ಷದ ಹಿಂದೆ ದೇಶದ ಪರಿಸ್ಥಿತಿ ಹೇಗಿತ್ತು ಎಂಬುದನ್ನ ಊಹಿಸಿಕೊಳ್ಳಿ. ಮಿತಿಮೀರಿದ ಭ್ರಷ್ಟಾಚಾರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದಲ್ಲಿ ಕೀಳಾಗಿ ಕಾಣಲಾಗುತಿತ್ತು. ಮೋದಿ ಬಂದ ಬಳಿಕ ರಾಜಕೀಯವಾಗಿ ಕೈಗೊಂಡ ಅತ್ಯುತ್ತಮ ನಿರ್ಧಾರಗಳಿಂದ ದೇಶ ಪ್ರಗತಿ ಪಥದಲ್ಲಿ ಸಾಗಿದ್ದರಿಂದ, ಹತ್ತಾರು ದೇಶಗಳು ಭಾರತದತ್ತ ತಿರುಗಿ ನೋಡುತ್ತಿವೆ ಎಂದರು. ದೇಶದ ಜಿಡಿಪಿ 7.4 ರಷ್ಟಿದೆ. ಅಮೇರಿಕಾದ್ದು 2.3, ಚೀನಾ 3.3, ಫ್ರಾನ್ಸ್ 1.5 ಆಗಿದೆ. ದೇಶದ ಅಭಿವೃದ್ಧಿಗೆ ಮೋದಿ ದೃಢ ನಿಲುವು ತಾಳಿದ್ದರಿಂದ ಅಭಿವೃದ್ಧಿ ಕೆಲಸಗಳು ವೇಗ ಪಡೆದುಕೊಂಡವು. ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಕೊರೊನಾ ಸೋಂಕಿನ ವೇಳೆಯಲ್ಲಿ ಜನ ಹಸಿವಿನಿಂದ ಬಳದಂತೆ ನೋಡಿಕೊಳ್ಳಲಾಯಿತು ಎಂದರು.
ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾದಾಗ ವಿದೇಶಾಂಗ ಸಚಿವರು ರಷ್ಯಾ ಸೇರಿದಂತೆ ಹಲವು ದೇಶಗಳೊಂದಿಗೆ ಮಾತುಕತೆ ನಡೆಸಿದರು. ಉಕ್ರೇನ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಮೋದಿ ಮುಂದಾದರು. ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಯಿತು. ಕೆಲವು ನಿಮಿಷ ಯುದ್ಧ ಸ್ಥಗಿತಗೊಳಿಸುವಲ್ಲಿ ಭಾರತ ಯಶಸ್ವಿಯಾಗಿದ್ದರಿಂದ ಆ ಅವಧಿಯಲ್ಲಿ ದೇಶದ ವಿದ್ಯಾರ್ಥಿಗಳು ತಿರಂಗ ಧ್ವಜ ಹಿಡಿದು ಮುನ್ನೆಡೆಯಲು ಸಾಧ್ಯವಾಯಿತು ಎಂದರು. ಬೇರೆ ದೇಶದ ವಿದ್ಯಾರ್ಥಿಗಳು ಭಾರತದ ವಿದ್ಯಾರ್ಥಿಗಳೊಂದಿಗೆ ಹೆಜ್ಜೆಹಾಕುವ ಮೂಲಕ ಅವರುಗಳು ಆ ದೇಶ ಸೇರಿಕೊಳ್ಳಲು ಸಾಧ್ಯವಾಯಿತು. ಕರ್ನಾಟಕ 600 ಮಂದಿ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಸುರಕ್ಷಿತವಾಗಿ ವಾಪಸ್ ಬಂದರು ಎಂದರು. ದೇಶದಲ್ಲಿಯೇ ಕರ್ನಾಟಕ ಎಲೆಕ್ಟ್ರಾನಿಕ್ ಉಪಕರಣ ತಯಾರಿಕೆಯಲ್ಲಿ 2ನೇ ಸ್ಥಾನದಲ್ಲಿದೆ. ಬಹುತೇಕ ದೇಶಗಳಿಗೆ ದೇಶದಲ್ಲಿ ತಯಾರಾಗುತ್ತಿರುವ ವಸ್ತುಗಳನ್ನು ರಫ್ತು ಮಾಡಲಾಗುತ್ತಿದೆ.
ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಿದ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ಹಲವು ವರ್ಗಗಳಿಗೆ ಅನುಕೂಲವಾಗಿದೆ. ಸಿದ್ಧರಾಮಯ್ಯ ಅವಧಿಯಲ್ಲಿ ವಿದ್ಯುತ್ ಕಡಿತಗೊಳ್ಳುತ್ತಿತ್ತು. ಈಗ ಗುಣಮಟ್ಟದಲ್ಲಿ ನಿರಂತರವಾಗಿ ವಿದ್ಯುತ್ ನೀಡಲಾಗುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಅಧಿಕಗೊಂಡಿತ್ತು. ಒಡೆದಾಳುವ ನೀತಿ ಅನುಸರಿಸಿದರು. ನಾವು ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿದರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆ ಸಂಘಟನೆಯ ಮುಖಂಡರ ಮೇಲಿದ್ದ 175 ಕೇಸುಗಳನ್ನು ವಾಪಸ್ ಪಡೆಯಲಾಯಿತು. ಲೋಕಾಯುಕ್ತವನ್ನು ಕೈಬಿಡಲಾಯಿತು ಸಿದ್ದರಾಮಯ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಬೆಳ್ಳಿಪ್ರಕಾಶ್, ಸುರೇಶ್, ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಸೇರಿದಂತೆ ಬಿ.ಜೆ.ಪಿ.ಯ ಮುಖಂಡರುಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಪ್ರವಾಸ ಮುಗಿಸಿ ಸೋಮವಾರ ಸಂಜೆ ಚಿಕ್ಕಮಗಳೂರು ಜಿಲ್ಲಾ ಪ್ರವಾಸಕ್ಕೆ ಆಗಮಿಸಿದ್ದ ಜೆ.ಪಿ.ನಡ್ಡಾ ಕೊಪ್ಪದಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ನಂತರ ಶೃಂಗೇರಿ ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ನಿನ್ನೆ ಚಿಕ್ಕಮಗಳೂರು ಕಾರ್ಯಕ್ರಮ ಮುಗಿಸಿ ಬೇಲೂರು ಮತ್ತು ಹಾಸನದಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.