ಸಕಲೇಶಪುರ ತಾಲ್ಲೂಕಿನ ಕಾಡುಮನೆ ಎಸ್ಟೇಟ್ ಸಮೀಪ ಮೂರ್ಕಣ್ಣು ಗುಡ್ಡದಲ್ಲಿ ಕಾಡ್ಗಿಚ್ಚು ನಂದಿಸಲು ಹೋಗಿ ಬೆಂಕಿಯ ಉರಿ ತಾಗಿ ತೀವ್ರ ಗಾಯಗೊಂಡಿದ್ದ ಫಾರೆಸ್ಟ್ ಗಾರ್ಡ್ ಸುಂದರೇಶ್ ಎಂಬುವವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಗುರುವಾರ ಅರಣ್ಯ ಪ್ರದೇಶದಲ್ಲಿ ಹಬ್ಬಿದ್ದ ಕಾಡ್ಗಿಚ್ಚು ನಂದಿಸಲು ತೆರಳಿದ್ದ ನಾಲ್ವರು ಅರಣ್ಯ ಸಿಬ್ಬಂದಿ ಗಾಗೊಂಡಿದ್ದರು. ಉಪವಲಯ ಅರಣ್ಯಾಧಿಕಾರಿ ಮಂಜುನಾಥ್, ಫಾರೆಸ್ಟ್ ಗಾರ್ಡ್ ಸುಂದರೇಶ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ತೀವ್ರ ಗಾಯಗೊಂಡಿದ್ದರು. ಫಾರೆಸ್ಟ್ ವಾಚ್ ಮನ್ ಗಳಾದ ತುಂಗೇಶ್ ಮತ್ತು ಮಹೇಶ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
ಮೈತುಂಬಾ ಸುಟ್ಟಗಾಯಗಳಿಂದ ಬಳಲಿದ್ದ ಮಂಜುನಾಥ್ ಮತ್ತು ಸುಂದರೇಶ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರಲ್ಲಿ ಸುಂದರೇಶ್ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ಮಂಜುನಾಥ್ ಅವರು ಸಹ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.
ಮೃತ ಸುಂದರೇಶ್ ಅವರು ತೀರ್ಥಹಳ್ಳಿ ಮೂಲದವರು.ಕಳೆದ ಕೆಲ ವರ್ಷಗಳಿಂದ ಸಕಲೇಶಪುರ ವಲಯದಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಇತ್ತೀಚೆಗೆ ಮೂಡಿಗೆರೆ ಭಾಗದಲ್ಲಿ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇವರು ತುಂಬಾ ಧೈರ್ಯಶಾಲಿಯಾಗಿದ್ದರು, ಅರಣ್ಯ ರಕ್ಷಣೆಯ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ಮೃತರು ಪತ್ನಿ ಮತ್ತು ನಾಲ್ಕು ವರ್ಷದ ಮಗಳನ್ನು ಅಗಲಿದ್ದಾರೆ.
ಗುರುವಾರ ರಸ್ತೆ ಸಂಪರ್ಕವಿಲ್ಲದ ದಟ್ಟ ಅರಣ್ಯದಲ್ಲಿ ಈ ಸಿಬ್ಬಂದಿಗಳು ಬೆಂಕಿಯ ಉರಿಯೊಳಗೆ ಸಿಲುಕಿದ್ದರು. ಕೊನೆಗೆ ಇತರೆ ಅರಣ್ಯ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ನಾಲ್ವರನ್ನು ಸುಮಾರು 12 ಕಿಲೋಮೀಟರ್ ದೂರ ಬಟ್ಟೆಯಲ್ಲಿ ಡೋಲಿ ಮಾಡಿ ಅದರಲ್ಲಿ ಹೊತ್ತು ನಂತರ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿತ್ತು.