ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂಬ ಅರೋಪದ ಮೇಲೆ ಮೂಡಿಗೆರೆ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಮೂಡಿಗೆರೆ ಠಾಣೆಯ ಪೊಲೀಸ್ ಪೇದೆಗಳಾದ ವಸಂತ್ ಮತ್ತು ಲೋಹಿತ್ ಇವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಅವರು ಅಮಾನತು ಮಾಡಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಹೇಮಾವತಿ ನಗರದ ಮಂಜು ಎಂಬುವವರನ್ನು ಕಳ್ಳತನ ಆರೋಪದಲ್ಲಿ ಠಾಣೆಗೆ ಕರೆದೊಯ್ದು ಚಿತ್ರಹಿಂಸೆ ನೀಡಿ ನಡೆದಾಡಲಾರದ ಸ್ಥಿತಿಗೆ ತಂದಿದ್ದಾರೆ ಎಂದು ಮಂಜು ಪತ್ನಿ ಯಶೋಧ ನೀಡಿದ ದೂರಿನ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಏನೀದು ಘಟನೆ ? : ದಾರದಹಳ್ಳಿ ಗ್ರಾಮದ ತನ್ನ ಮನೆಯಲ್ಲಿ ಕಳ್ಳತನವಾಗಿದೆ ಎಂದು ಮನೆ ಮಾಲೀಕ ವಿಶ್ವನಾಥ್ ಪೂಜಾರಿ ಎಂಬುವರು ಮೂಡಿಗೆರೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಮನೆ ಚಿಲಕ ಹಾಗೂ ಮನೆಯೊಳಗಿರುವ ಕೆಲ ವಸ್ತುಗಳ ಮೇಲಿರುವ ಹೆಬ್ಬೆರಳು ಗುರುತನ್ನು ಪರೀಕ್ಷೆ ನಡೆಸಿದಾಗ ಪಕ್ಕದ ಮನೆಯಲ್ಲಿಯೇ ವಾಸವಾಗಿದ್ದ ವಿಶ್ವನಾಥ್ ರವರ ಸಹೋದರ ಮಂಜು ಅವರ 2 ಬೆರಳಚ್ಚಿನ ಗುರುತು ಮನೆ ಮುಂಭಾಗದ ಚಿಲಕದಲ್ಲಿ ಪತ್ತೆಯಾಗಿದೆ. ಈ ಹಿನ್ನಲ್ಲೆಯಲ್ಲಿ ಮಂಜು ಅವರನ್ನು ಠಾಣೆಗೆ ಕರೆದೊಯ್ದು ತನಿಖೆ ನಡೆಸಿದ್ದಾರೆ. ತನಿಖೆಯ ಹೆಸರಿನಲ್ಲಿ ಮಂಜು ಮೇಲೆ ದೈಹಿಕ ಹಿಂಸೆ ನೀಡಿದ್ದಾರೆ. ಮಂಜು ಬೆನ್ನು ಮತ್ತು ಕಾಲಿಗೆ ತೀವ್ರವಾಗಿ ಗಾಯವಾಗಿದೆ. ಆದರೆ ಮಂಜು ತಾನು ಅಮಾಯಕ ಕಳ್ಳತನ ಪ್ರಕರಣಕ್ಕೂ ತನಗೂ ಯಾವುದೆ ಸಂಬಂಧ ಇಲ್ಲ ಎಂದು ಹೇಳಿದ್ದು ಪೊಲೀಸರು ಕೊನೆಗೆ ಅವರನ್ನು ಮನೆಗೆ ವಾಪಾಸ್ಸು ಬಿಟ್ಟು ಕಳಿಸಿದ್ದಾರೆ.
ಪೊಲೀಸರು ಠಾಣೆ ಬಂದು ಹೋಗು ಎಂದು ಕರೆ ಮಾಡಿದ್ದು, ಆಟೋ ಚಾಲಕರಾದ ಮಂಜು ಬೆಳಿಗ್ಗೆ ತನ್ನ ಮಗಳನ್ನು ಶಾಲೆಗೆ ಬಿಡಲು ಎಂದು ಆಟೋದಲ್ಲಿ ಮಗಳನ್ನು ಕೂರಿಸಿ ಠಾಣೆಗೆ ಹೋದಾಗ ಪೇದೆಗಳಾದ ಲೋಹಿತ್ ಮತ್ತು ವಸಂತ್ ಮಂಜು ಮೇಲೆ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಮಾಧ್ಯಮದ ಎದುರು ಹೇಳಿಕೆ ನೀಡಿದ್ದಾರೆ.
ತನಿಖೆಯ ಹೆಸರಿನಲ್ಲಿ ಮಂಜು ಅವರಿಗೆ ಪೊಲೀಸರು ತೀವ್ರ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಂಜು ಪತ್ನಿ ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಚಿಕ್ಕಮಗಳೂರು ಎಸ್ಪಿಯವರಿಗೆ ದೂರು ನೀಡಿದ್ದಾರೆ. ಪೆಟ್ಟು ತಿಂದು ಅಸ್ವಸ್ಥರಾಗಿದ್ದ ಮಂಜು ಅವರನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಳಿಕ ಮಂಜು ಅವರ ಪತ್ನಿ ಯಶೋಧ ತಮ್ಮ ದೂರಿನಲ್ಲಿ ನನ್ನ ಗಂಡನಿಗೆ ಸಂಬಂಧವಿಲ್ಲದ ವಿಚಾರಕ್ಕೆ ಸಹಿ ಹಾಕಬೇಕೆಂದು ಒತ್ತಾಯಿಸಿ ಠಾಣೆಗೆ ಕರೆದೊಯ್ದು ಪಿಎಸ್ಐ ಆದರ್ಶ, ಸಿಬ್ಬಂದಿ ಲೋಹಿತ್ ಮತ್ತು ವಸಂತ ಅವರು ಅವ್ಯಾಚ್ಯ ಶಬ್ಧದಿಂದ ಬೈದು ಬೂಟು ಕಾಲಿನಿಂದ ಎದೆಗೆ ಹೊಡೆದು ಮಾರಣಾಂತಿಕ ವಸ್ತುಗಳಿಂದ ಬೆನ್ನು, ಕಾಲು, ಪಾದಗಳಿಗೆ ಹೊಡೆದು, ಚಿತ್ರಹಿಂಸೆ ನೀಡಿ ನಡೆಯದ ಸ್ಥಿತಿ ಮಾಡಿದ್ದಾರೆ. ಅಲ್ಲದೇ ಮಾನಸಿಕವಾಗಿ ಕುಗ್ಗಿ ಹೋಗುವಂತೆ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನಮಗೆ ರಕ್ಷಣೆ ನೀಡಬೇಕೆಂದು ದೂರು ನೀಡಿದ್ದರು.
ಇದೀಗ ಮಂಜು ಪತ್ನಿ ನೀಡಿದ ದೂರಿನ ಅನ್ವಯ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.