ಕಾಫಿ ಕಣಿವೆಯಲ್ಲಿ ಹುಲಿದಾಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಬಾಳಿ ಬದುಕಬೇಕಾದ ಅಮಾಯಕ ಬಾಲಕನೋರ್ವ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಹೌದು ಇದು ಕಾಫಿ ಕಣಿವೆ ಕೊಡಗಿನಲ್ಲಿ ನಡೆದಿರುವ ಘಟನೆ . ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನನ್ನು ಹುಲಿ ಕೊಂದು ಹಾಕಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟ ಗ್ರಾಮದ ಪಲ್ಲೇರಿ ಎಂಬಲ್ಲಿ ಬಾಲಕನನ್ನು ಹುಲಿ ಕೊಂದು ಹಾಕಿದೆ.
ಕುಟ್ಟ ಬಳಿ ಹುಲಿ ದಾಳಿಗೆ 12 ವರ್ಷದ ಬಾಲಕ ಬಲಿಯಾಗಿದ್ದಾನೆ. ಹುಲಿ ದಾಳಿಯಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೂರಿಕಾಡು ನೆಲ್ಲಿರ ಪೂಣಚ್ಚ ಎಂಬುವವರ ಮನೆಯಲ್ಲಿ ಕೆಲಸ ಮಾಡಲು ಬಂದಿದ್ದ ಪಂಚನಳ್ಳಿ ಮೂಲದ ಕಾರ್ಮಿಕ ಬಾಲಕ ಮನೆಯ ಮುಂದಿನ ತೋಟದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಹುಲಿ ದಾಳಿ ನಡೆಸಿ ಸ್ಥಳದಲ್ಲೇ ಕೊಂದು ಹಾಕಿದೆ.
ಚಿಕ್ಕಮಗಳೂರಿನಲ್ಲಿ ಮಿತಿಮೀರಿದ ಹುಲಿ ಕಾಟ :
ನಮ್ಮ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿಯೊಂದು ಸತತವಾಗಿ ಜಾನುವಾರುಗಳನ್ನು ಕೊಂದು ತಿನ್ನುತ್ತಿದೆ. ಮನೆಯ ಸಮೀಪವೇ ಬಂದು ಜಾನುವಾರುಗಳನ್ನು ಹಿಡಿದು ಕೊಲ್ಲುತ್ತಿದೆ. ಮೊನ್ನೆ ತಾನೆ ಮತ್ತೀಕಟ್ಟೆ ಎಂಬಲ್ಲಿ ಸಿಂಧಿ ಹಸುವೊಂದನ್ನು ಕೊಂದು ತಿಂದಿದೆ.
ಇದರ ಬಗ್ಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಹೀಗೆ ಆದರೆ ಮುಂದೊಂದು ದಿನ ನಿನ್ನೆ ಕೊಡಗಿನಲ್ಲಿ ಆದಂತೆ ಹುಲಿ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ. ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಆದಷ್ಟು ಬೇಗ ಇಲ್ಲಿರುವ ಹುಲಿಯನ್ನು ಹಿಡಿದು ಬೇರೆಡೆ ಸಾಗಿಸಬೇಕು ಎಂದ ಸಾರ್ವಜನಿಕರು ಒತ್ತಾಯಿಸಿದ್ದಾರೆ.