ಸಂಚಾರಿ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ದಂಡ ಕಟ್ಟಲು ಬಾಕಿ ಇರುವವರಿಗೆ ಸರ್ಕಾರಿ ಸಿಹಿ ಸುದ್ದಿ ನೀಡಿದೆ.
ಸಂಚಾರಿ ನಿಯಮ ಉಲ್ಲಂಘಿಸಿ ಕೇಸು ದಾಖಲಾಗಿ ನ್ಯಾಯಾಲಯದಲ್ಲಿ ದಂಡ ಕಟ್ಟಲು ಬಾಕಿ ಇರುವವರಿಗೆ ದಂಡ ಮೊತ್ತದ ಶೇಕಡಾ 50ರಷ್ಟು ರಿಯಾಯಿತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಒಂದು ಬಾರಿಗೆ ಅನ್ವಯವಾಗುವಂತೆ ನೀಡಿರುವ ರಿಯಾಯಿತಿ ಯೋಜನೆಯೂ ಇದೇ ಫೆಬ್ರುವರಿ 11ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.
ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಸುಮಾರು 1300ಕೋಟಿ ದಂಡ ಪಾವತಿಯಾಗಲು ಬಾಕಿ ಇದೆ. ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಇದರಿಂದ ಸರ್ಕಾರಕ್ಕೂ ನಷ್ಟ ಮತ್ತು ಜನರಿಗೂ ಸಮಸ್ಯೆಯಾಗಿದೆ. ಇದನ್ನು ಆದಷ್ಟು ಇತ್ಯರ್ಥಮಾಡಬೇಕು ಎಂಬ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಭೆಯಲ್ಲಿಯೂ ಚರ್ಚೆ ನಡೆಸಲಾಗಿತ್ತು.
ಇದೇ ಫೆಬ್ರುವರಿ 11ರಂದು ರಾಜ್ಯವ್ಯಾಪಿ ಎಲ್ಲಾ ನ್ಯಾಯಾಲಯಗಳಲ್ಲಿ ಲೋಕಅದಾಲತ್ ನಡೆಯುತ್ತಿದ್ದು ಅಲ್ಲಿ ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಶೇಕಡಾ 50ರಷ್ಟು ದಂಡಕಟ್ಟಿ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಪಾನಮತ್ತ ವಾಹನ ಚಾಲನೆ ಹೊರತುಪಡಿಸಿ ಉಳಿದ ಎಲ್ಲಾ ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗುತ್ತದೆ.
ಫೆಬ್ರುವರಿ 11ರ ಒಳಗಾಗಿ ದಂಡ ಪಾವತಿ ಮಾಡುವವರಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗುತ್ತದೆ.
ಈ ರಿಯಾಯಿತಿ ಯೋಜನೆಯ ಸದುಪಯೋಗಪಡಿಸಿಕೊಂಡು ವಾಹನ ಮಾಲೀಕರು ಮತ್ತು ಚಾಲಕರು ಅಧಿಕ ದಂಡಶುಲ್ಕದ ಹೊರೆಯಿಂದ ಪಾರಾಗಬಹುದಾಗಿದೆ.
ಸಮೀಪದ ಸಂಚಾರಿ ಠಾಣೆಯಲ್ಲಿ ಅಥವಾ ರಸ್ತೆಗಳಲ್ಲಿ ಕರ್ತವ್ಯ ನಿರತರಾಗಿರುವ ಸಂಚಾರಿ ಪೊಲೀಸರ ಬಳಿ ತಮ್ಮ ವಾಹನ ನೊಂದಣಿ ಸಂಖ್ಯೆ ಹೇಳಿ ಪರಿಶೀಲಿಸಿ ದಂಡ ಪಾವತಿಸಿಬಹುದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಾಫಿಕ್ ಪೊಲೀಸ್, ವಕೀಲರ ಮಾರ್ಗದರ್ಶನ ಪಡೆಯಬಹುದಾಗಿರುತ್ತದೆ.
ಕರ್ನಾಟಕ ರಾಜ್ಯ ಸಂಚಾರಿ ಪೊಲೀಸ್ ಅಧಿಕೃತ ವೆಬ್ ಸೈಟ್ ಮೂಲಕವೂ ತಮ್ಮ ತಮ್ಮ ಮೊಬೈಲ್ ಗಳ ಮೂಲಕವೂ ದಂಡ ಪಾವತಿಸಬಹುದು.
https://bangaloretrafficpolice.gov.in./