ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಪಕ್ಷಗಳ ನಡುವಿನ ರಾಜಕೀಯ ದ್ವೇಷ ತಾರಕ್ಕಕ್ಕೇರುತ್ತಿದೆ. ಜಿಲ್ಲೆಯಲ್ಲಿ ಏಕೈಕ ಕಾಂಗ್ರೇಸ್ ಶಾಸಕರನ್ನು ಹೊಂದಿರುವ ಶೃಂಗೇರಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಎರಡೂ ಪಕ್ಷಗಳು ರಾಜಕೀಯ ಹೋರಾಟವನ್ನು ವೈಯುಕ್ತಿಕ ಮಟ್ಟಕ್ಕೆ ತಂದು ಪರಸ್ಪರ ದೈಹಿಕ ಹಲ್ಲೆಗಳನ್ನು ನಡೆಸುವ ಹಂತಕ್ಕೆ ತಲುಪಿದೆ.
ಕ್ಷೇತ್ರದ ಶಾಸಕ ಕಾಂಗ್ರೇಸ್ ನ ಟಿ.ಡಿ.ರಾಜೇಗೌಡ ಮತ್ತು ಮಾಜಿ ಶಾಸಕ ಬಿ.ಜೆ.ಪಿ.ಯ ಡಿ. ಎನ್. ಜೀವರಾಜ್
ಅವರು ಏಕವಚನದಲ್ಲಿ ಪರಸ್ಪರರನ್ನು ದೂಷಿಸುವ ಹಂತ ತಲುಪಿದ್ದಾರೆ. ಇದರಿಂದ ಕಾರ್ಯಕರ್ತರು ಸಹ ಉದ್ವೇಗಕ್ಕೆ ಒಳಗಾಗಿ ಬಡಿದಾಡಿಕೊಳ್ಳುವ ಪ್ರಸಂಗಗಳು ನಡೆಯುತ್ತಿವೆ. ಇತ್ತೀಚೆಗೆ ಕ್ಷೇತ್ರದಾದ್ಯಂತ ಅಲ್ಲಲ್ಲಿ ಕಾರ್ಯಕರ್ತರು ನಡುವೆ ಗಲಾಟೆಗಳು ನಡೆಯುತ್ತಿವೆ.
ಇದೀಗ ಕ್ಷೇತ್ರದ ವ್ಯಾಪ್ತಿಯ ಎನ್.ಆರ್.ಪುರ ತಾಲೂಕಿನಲ್ಲಿ ಕಾಂಗ್ರೇಸ್ ತೊರೆದು ಬಿ.ಜೆ.ಪಿ. ಸೇರಿದ್ದ ಕಾರ್ಯಕರ್ತನೋರ್ವನ ಮೇಲೆ ಕಾಂಗ್ರೇಸ್ ಕಾರ್ಯಕರ್ತರು ಹಲ್ಲೆ ಮಾಡಿದ ಪ್ರಸಂಗ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್.ಆರ್.ಪುರ ತಾಲೂಕಿನ ನಾಗಲಾಪುರ ಸಮೀಪದ ರಾವೂರು ಗ್ರಾಮದ ಬಿಜೆಪಿ ಕಾರ್ಯಕರ್ತ ಶಿವು ಎಂಬುವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ಮನೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಮನೆಯಲ್ಲಿದ್ದ ಶಿವು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ತೀವ್ರ ಗಾಯವಾಗಿರುವ ಬಿಜೆಪಿ ಕಾರ್ಯಕರ್ತ ಶಿವು ಎನ್.ಆರ್.ಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆಗೊಳಗಾದ ಶಿವು ಮೊದಲ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ. ಕಳೆದ ತಿಂಗಳು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದನು. ಇದನ್ನ ಸಹಿಸದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಶಿವು ಆರೋಪಿಸಿದ್ದಾರೆ. ನಾಗಲಾಪುರ ಗ್ರಾಮದಲ್ಲಿ ಶಾಸಕ ರಾಜೇಗೌಡ ಕಾಂಗ್ರೆಸ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ದರು. ಈ ವೇಳೆ, ಕಾಂಗ್ರೆಸ್ನಿಂದ ಬಿಜೆಪಿ ಸೇರಿದ ಶಿವು ಜೊತೆ ಕಾಂಗ್ರೆಸ್ ಕಾರ್ಯಕರ್ತರು ಕ್ಯಾತೆ ತೆಗೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎನ್.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.