ಮೂಡಿಗೆರೆ ತಾಲ್ಲೂಕಿನಲ್ಲಿ 2019ರಲ್ಲಿ ನೆರೆಯಿಂದ ಸಂತ್ರಸ್ತರಾದ ಜನರಿಗೆ ತಾಲ್ಲೂಕಿನ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯ ಸುಣ್ಣದಗೂಡಿನಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸದೇ ಇರುವುದರಿಂದ ನೆರೆಸಂತ್ರಸ್ತರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಧುಗುಂಡಿ ಗ್ರಾಮಸ್ಥ ವಿಜೇಂದ್ರ, ಮಧುಗುಂಡಿ ಹಲಗಡಕ, ದುರ್ಗದಹಳ್ಳಿ, ಬಿದಿರುತಳದ 40 ನಿರಾಶ್ರಿತ ಕುಟುಂಬಗಳಿಗೆ 2020ರಲ್ಲಿ ಬಿ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಣಕಲ್ನ ಸುಣ್ಣದಗೂಡಿನ ಸಮೀಪ ಜಾಗ ನೀಡಿದ್ದರೂ ಮೂಲಭೂತ ಸೌಕರ್ಯ ಇಲ್ಲದೇ ಇಂದಿಗೂ ಬಹುತೇಕ ನೆರೆಸಂತ್ರಸ್ತರು ನೆಲೆಕಂಡುಕೊಂಡಿಲ್ಲ.5 ಕುಟುಂಬಗಳು ಮಾತ್ರ ಇಲ್ಲಿ ವಾಸಿಸುತ್ತಿವೆ. ಪ್ರಸ್ತುತ ಬಣಕಲ್ ಗ್ರಾ.ಪಂ ವತಿಯಿಂದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದ್ದರೂ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ನೀರು ಬಿಡುತ್ತಿರುವುದರಿಂದ ನೆರೆ ಸಂತ್ರಸ್ತರು ಪರದಾಡುವಂತಾಗಿದೆ ಎಂದು ತಿಳಿಸಿದ್ದಾರೆ.
ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೇ ಇರುವುದರಿಂದ ಮಳೆಗಾಲದ ಮಳೆನೀರು ಮನೆಯೊಳಗೆ ನುಗ್ಗುವ ಆತಂಕ ಎದುರಾಗಿದೆ. ಮನೆಗಳ ನಡುವಿನ ಒಳ ರಸ್ತೆಗಳ ಇಬ್ಬದಿ ಬಾಕ್ಸ್ ಚರಂಡಿ ನಿರ್ಮಿಸಿದರೂ ಕೂಡ ಭೂಮಿ ಸಮತಟ್ಟು ಇಲ್ಲದೇ ಇರುವುದರಿಂದ ಮಳೆ ನೀರು ಮನೆಯೊಳಗೆ ನುಗ್ಗಬಹುದಾಗಿದೆ. ಮೂಲಭೂತ ಸೌಕರ್ಯ ಮರೀಚಿಕೆಯಾಗಿರುವುದರಿಂದ ಪುನರ್ವಸತಿ ಪ್ರದೇಶದಲ್ಲಿರುವ ನೆರೆಸಂತ್ರಸ್ತರು ಈ ಬಾರಿಯ ಚುನಾವಣೆ ಬಹಿಷ್ಕರಿಸಲು ನಿರ್ದರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಬಿ ಹೊಸಹಳ್ಳಿ ಪಿಡಿಓ ಸಿಂಚನಾ, ಸುಣ್ಣದಗೂಡಿನಿಂದ ಬಿ ಹೊಸಳ್ಳಿಗೆ ಸುಮಾರು 4 ಕಿ.ಮಿ ದೂರವಿರುವುದರಿಂದ ಬಿ ಹೊಸಳ್ಳಿಯಿಂದ ಸುಣ್ಣದಗೂಡಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಪೈಪ್ಲೈನ್ ನಿರ್ಮಿಸಲು ನಿರ್ಮಾಣ ವೆಚ್ಚ ಹೆಚ್ಚಿರುವುದರಿಂದ ಗ್ರಾ.ಪಂ ಅನುದಾನದಲ್ಲಿ ಮಾಡಲು ಸಾಧ್ಯವಿಲ್ಲದೇ ಇರುವುದರಿಂದ ಜಲಜೀವನ್ ಮಿಷನ್ ಯೋಜನೆಯಲ್ಲಿ ಪೈಪ್ಲೈನ್ ನಿರ್ಮಿಸಲು ಪ್ರಸ್ತಾವನೆ ಕಳಿಸಲಾಗಿದ್ದು ಸರ್ವೆ ಕಾರ್ಯವೂ ಪೂರ್ಣಗೊಂಡಿದ್ದು ಟೆಂಡರ್ ಕಾರ್ಯ ಆಗಬೇಕಿದೆ.
ಕಾರ್ಮಿಕರ ಕೊರತೆಯಿಂದ ಚರಂಡಿ ಕಾಮಗಾರಿ ವಿಳಂಬವಾಗಿದ್ದು ಚರಂಡಿ ಕಾರ್ಯ ಶೀರ್ಘ ಪ್ರಾರಂಭವಾಗಲಿದೆ. ‘ಎಂದು ತಿಳಿಸಿದ್ದಾರೆ.