ಜಮೀನಿನ ನಕ್ಷೆ ಮಾಡಿಕೊಡಲು 5 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆಯಲ್ಲಿ ಸರ್ವೆಯರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಜಮೀನಿನ ನಕ್ಷೆ ಮಾಡಿಕೊಡಲು 5 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಸರ್ವೆಯರ್ ರವಿಕುಮಾರ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅಜ್ಜಂಪುರ ತಾಲೂಕಿನ ಬೇಗೂರು ಗ್ರಾಮದ ನಿವಾಸಿ ನಾಗರಾಜ್ ಅವರು ಕೊಟ್ಟ ದೂರಿನನ್ವಯ ಲೋಕಾಯುಕ್ತ ತಂಡ ಕಾರ್ಯಾಚರಣೆ ನಡೆಸಿತ್ತು.
ನಾಗರಾಜ್ ಅವರ ತಂದೆ ಬೇಗೂರು ಗ್ರಾಮದಲ್ಲಿ 35 ಗುಂಟೆ ಜಮೀನನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದರು. ಅವರು ಸಕ್ರಮಕ್ಕಾಗಿ ಫಾರಂ ನಂ. 53ರಡಿ ಅಡಿ ಅರ್ಜಿ ಸಲ್ಲಿಸಿದ್ದರು. ತಂದೆಯ ನಿಧನದ ನಂತರ ಆ ಜಮೀನು ತನ್ನ ತಾಯಿ ಹಾಗೂ ತನ್ನ ಹೆಸರಿಗೆ ಸಕ್ರಮ ಮಾಡಿಕೊಡಲು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಜಮೀನು ಸಕ್ರಮ ಮಾಡಲು ತರೀಕೆರೆ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಆದೇಶವಾಗಿತ್ತು.
ಈ ಜಮೀನಿನ ನಕ್ಷೆ ತಾಲೂಕು ಸರ್ವೆಯರ್ನಿಂದ ಮಾಡಿಸಿಕೊಡುವಂತೆ ಕಂದಾಯ ನಿರೀಕ್ಷಕರು ಹೇಳಿದ್ದರಿಂದ ಸರ್ವೆಯರ್ ರವಿಕುಮಾರ್ ಅವರಿಗೆ ಕೇಳಿದಾಗ ಅವರು ನಕ್ಷೆ ಮಾಡಿಕೊಡಲು ಮೊದಲು 8 ಸಾವಿರ ರುಪಾಯಿ ಕೇಳಿದ್ದರು. 5 ಸಾವಿರ ರುಪಾಯಿ ಲಂಚ ಕೊಡಬೇಕೆಂದು ಕೇಳಿಕೊಂಡಿರುವುದು ನಾಗರಾಜ್ ಅವರು ತಮ್ಮ ಮೊಬೈಲ್ನಲ್ಲಿ ರೇಕಾರ್ಡ್ ಮಾಡಲಾಗಿತ್ತು.
ಅದನ್ನು ಚಿಕ್ಕಮಗಳೂರು ಲೋಕಾಯುಕ್ತರ ಕಚೇರಿಗೆ ಸಲ್ಲಿಸಿ ದೂರು ನೀಡಿದ ಮೇರೆಗೆ ಕಾರ್ಯಾಚರಣೆ ನಡೆಸಿ ರವಿಕುಮಾರ್ ಅವರು ಬಂಧಿಸಲಾಯಿತು. ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಮಾರ್ಗದರ್ಶನದಲ್ಲಿ ಪಿಎಸ್ಐ ಅನಿಲ್ ರಾಥೋಡ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದರು.
ಸದರಿ ಸರ್ವೇಯರ್ ರವಿಕುಮಾರ್ ಮೇಲೆ ಬಹಳಷ್ಟು ಆರೋಪಗಳು ಇದ್ದವೆಂದು ತಿಳಿದುಬಂದಿದೆ. ತಾಲ್ಲೂಕಿನ ರೈತರಿಗೆ ಸರ್ವೇ ಕಾರ್ಯಗಳನ್ನು ಮಾಡಿಕೊಡಲು ಬಹಳಷ್ಟು ಸತಾಯಿಸುವುದು ಮತ್ತು ಲಂಚಕ್ಕೆ ಬೇಡಿಕೆ ಇಡುತ್ತಿದ್ದ ರವಿಕುಮಾರ್ ಉಪಟಳದಿಂದ ರೈತರು ಬೇಸತ್ತಿದ್ದರು.