ಹೇಮಾವತಿ ನದಿಗೆ ಕಾಫಿ ಪಲ್ಪರ್ ತ್ಯಾಜ್ಯ ನೀರು ಬಿಟ್ಟ ಪರಿಣಾಮ ನದಿ ನೀರು ಕಲುಷಿತವಾಗಿ ಹರಿಯುತ್ತಿದೆ.
ಮೂಡಿಗೆರೆ ಮತ್ತು ಸಕಲೇಶಪುರ ತಾಲ್ಲೂಕುಗಳ ಗಡಿಭಾಗದಲ್ಲಿರುವ ಚಕ್ಕುಡಿಗೆ ಗ್ರಾಮದಲ್ಲಿ ಕುಡಿಯುವ ನೀರು ಕಾಫಿ ಪಲ್ಪರ್ ವಾಸನೆ ಬರುತ್ತಿತ್ತು. ನಂತರ ಕುಡಿಯುವ ನೀರಿನ ಮೂಲವಾದ ಹೇಮಾವತಿ ನದಿ ನೀರು ಕಪ್ಪುಬಣ್ಣದಲ್ಲಿ ಹರಿಯುತ್ತಿದ್ದುದನ್ನು ಗಮನಿಸಿದ ಸ್ಥಳೀಯ ಯುವಕರಾದ ಪೂರ್ಣೇಶ್, ಸಂದೇಶ್ ಮತ್ತು ಸಂತೋಷ್ ಈ ಬಗ್ಗೆ ಅಧಿಕಾರಿಗಳ ಮತ್ತು ಸಾರ್ವಜನಿಕರ ಗಮನಸೆಳೆದಿದ್ದಾರೆ.
ರಾತ್ರಿ ಸಮಯದಲ್ಲಿ ಕಾಫಿ ಪಲ್ಪರ್ ತ್ಯಾಜ್ಯ ನೀರನ್ನು ಹೇಮಾವತಿ ನದಿಗೆ ಬಿಡುತ್ತಿದ್ದು, ಇದರಿಂದ ನದಿ ನೀರು ಕಪ್ಪುಬಣ್ಣಕ್ಕೆ ತಿರುಗಿದ್ದು, ಕೊಳೆತ ವಾಸನೆ ಬರುತ್ತಿದೆ. ಇದರಿಂದ ಜಲಚರಗಳ ಜೀವಕ್ಕೆ ಕುತ್ತಾಗಿದ್ದು, ಈ ನೀರನ್ನು ಸೇವಿಸುವ ಜಾನುವಾರುಗಳು ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ. ಹೇಮಾವತಿ ನದಿ ನೀರನ್ನು ಅನೇಕ ಕಡೆ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿದ್ದು ಈ ನೀರನ್ನು ಸೇವಿಸಿದರೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ.
ನದಿಯ ದಡದಲ್ಲಿ ಸಾಗಿದರೆ ಪಲ್ಪರ್ ನೀರಿನ ಕೆಟ್ಟ ವಾಸನೆ ಮೂಗಿಗೆ ಹೊಡೆಯುತ್ತಿದೆ. ಈ ಬಗ್ಗೆ ಸ್ಥಳೀಯ ಯುವಕರು ವಿಡಿಯೋ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ. ಈ ರೀತಿ ನದಿಗೆ ಕಲುಷಿತ ನೀರನ್ನು ಬಿಡುತ್ತಾ ಅನಾಗರೀಕ ಬೇಜವಾಬ್ದಾರಿ ವರ್ತನೆ ತೋರುತ್ತಿರುವ ಎಸ್ಟೇಟ್ ಮಾಲೀಕರನ್ನು ಗುರುತಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಲಕ್ಷಾಂತರ ಜನರಿಗೆ ಜೀವನಾಡಿಯಾಗಿರುವ, ಜನ ಜಾನುವಾರುಗಳಿಗೆ ಜೀವಸೆಲೆಯಾಗಿರುವ ಹೇಮಾವತಿ ನದಿಗೆ ಈ ರೀತಿ ಪಲ್ಪರ್ ನೀರು ಬಿಡುವುದು ವರ್ಷಂಪ್ರತಿ ನಡೆಯುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗಳು, ತಹಸೀಲ್ದಾರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.