ಇಂದು ಬೆಳಗ್ಗೆಯಿಂದ ಮಲೆನಾಡಿನ ಬಹುತೇಕ ಕಡೆ ಮೋಡಕವಿದ ವಾತಾವರಣ ಸೃಷ್ಟಿಯಾಗಿದ್ದು, ಅನೇಕ ಕಡೆ ಧಾರಾಕಾರ ಮಳೆ ಸುರಿದಿದೆ. ಅಕಾಲಿಕವಾಗಿ ಬದಲಾದ ವಾತಾವರಣ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.
ಈಗ ಬಹುತೇಕ ಕಡೆ ಕಾಫಿ ಕೊಯ್ಲು, ಅಡಿಕೆ ಕೊಯ್ಲು, ಭತ್ತದ ಕಟಾವು ಕೆಲಸ ನಡೆಯುತ್ತಿದೆ. ಫಸಲನ್ನು ಕೊಯ್ದು ರೈತರು ಕಣದಲ್ಲಿ ಹರಡಿದ್ದಾರೆ. ಈಗ ಮಳೆ ಬಂದರೆ ಕಣದಲ್ಲಿ ಇರುವ ಕಾಫಿ ಹಾಳಾಗುವುದರ ಜೊತೆಗೆ ತೋಟದಲ್ಲಿ ಕೊಯ್ಲು ಮಾಡಲು ಬಾಕಿಯಿರುವ ರಸಭರಿತವಾಗಿ ಹಣ್ಣಾಗಿರುವ ಕಾಫಿ ನೆಲ ಸೇರುತ್ತದೆ.
ಇಂದು ಮಧ್ಯಾಹ್ನ ಕಾಫಿನಾಡಿನ ಬಹುತೇಕ ಕಡೆ ಮಳೆಯಾಗಿದೆ. ಈಗ ಮಳೆಯಾಗುವುದರಿಂದ ಕಾಫಿ ಅಕಾಲಿಕವಾಗಿ ಹೂ ಆಗುತ್ತದೆ. ಇದರಿಂದ ಮುಂದಿನ ವರ್ಷದ ಫಸಲಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಭೂಮಿಯ ತೇವಾಂಶ ಹೆಚ್ಚಾಗಿ ಮುಂದಿನ ಫಸಲಿನ ಹೂವು ಅರಳುವ ಪ್ರಮಾಣವೂ ಕಡಿಮೆಯಾಗುತ್ತದೆ.
ಹಾಗೆಯೇ ಅನೇಕ ಕಡೆ ಅಡಿಕೆ ಕೊಯ್ಲು ಬಾಕಿ ಇದೆ. ಕೊಯ್ಲು ಮಾಡಿ ಒಣಗಿಸಲು ಹಾಕಿರುವ ಅಡಿಕೆ ಮಳೆಯಿಂದಾಗಿ ಹಾಳಾಗುತ್ತದೆ. ಸಾಕಷ್ಟು ರೈತರು ಭತ್ತದ ಕೊಯ್ಲು ಮಾಡಿ ಪೈರನ್ನು ಕಣದಲ್ಲಿ ಒಟ್ಟು ಹಾಕಿದ್ದಾರೆ.
ಒಟ್ಟಾರೆ ಅಕಾಲಿಕ ಮಳೆ ರೈತರನ್ನು ಕಂಗಾಲಾಗಿಸಿದೆ. ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.
ಹವಮಾನ ಮುನ್ಸೂಚನೆ :
ಈಗಿನ ಹವಮಾನ ಮುನ್ಸೂಚನೆಯ ಪ್ರಕಾರ ಮುಂದಿನ 48 ಗಂಟೆಗಳಲ್ಲಿಯೂ ರಾಜ್ಯದ ದಕ್ಷಿಣ ಒಳನಾಡು ಪ್ರದೇಶದಲ್ಲಿ ಮೋಡಕವಿದ ವಾತಾರವಣವಿರಲಿದ್ದು ಹಗುರದಿಂದ ಸಾಧಾರಣ ಮಳೆಯಾಗಲಿದೆ, ತಾಪಮಾನ 4 ರಿಂದ 5 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆಯಾಗುವ ಸಂಭವವಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯುತ್ತದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.