ನಾಳೆ ಚಿಕ್ಕಮಗಳೂರಿನಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಪ್ರಜಾಧ್ವನಿ ಸಮಾವೇಶದಲ್ಲಿ ಐವತ್ತು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ಮೂಡಿಗೆರೆ ತಾಲ್ಲೂಕು ಕಾಂಗ್ರೇಸ್ ವಕ್ತಾರ ಮರಗುಂದ ಪ್ರಸನ್ನ ತಿಳಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ್ದು ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಕನಿಷ್ಠ 5 ಸಾವಿರ ಮಂದಿ ಸಮಾವೇಶದಲ್ಲಿ ಭಾಗವಹಿಸಿಲಿದ್ದಾರೆ. ಗ್ರಾಮೀಣ ಪ್ರದೇಶದಿಂದ ಜನರು ಸ್ವಯಂಪ್ರೇರಿತರಾಗಿ ಸಮಾವೇಶಕ್ಕೆ ಭಾಗವಹಿಸಿಲು ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ.
ಸಮಾವೇಶದಲ್ಲಿ ಕಾಂಗ್ರೇಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೇಸ್ ವ್ಯಕ್ತವಾಗುತ್ತಿರುವ ಬೆಂಬಲವನ್ನು ಕಂಡು ವಿಚಲಿತವಾಗಿರುವ ಬಿ.ಜೆ.ಪಿ. ಸಮಾವೇಶಕ್ಕೆ ಅಡ್ಡಿಪಡಿಸಬೇಕೆಂದು ಸಾಕಷ್ಟು ತಂತ್ರಗಾರಿಕೆ ನಡೆಸುತ್ತಿದೆ. ಸಮಾವೇಶ ನಿಗದಿಯಾಗಿದ್ದ ಪಟಾಕಿ ಮೈದಾನದಲ್ಲಿ ಸಮಾವೇಶ ನಡೆಸಲು ಜಾಗದ ಮಾಲೀಕರು ಒಪ್ಪಿಗೆ ನೀಡಿದ್ದರು. ಜಿಲ್ಲಾಡಳಿತವೂ ಅನುಮತಿ ನೀಡಿತ್ತು. ಆದರೆ ಬಿಜೆಪಿ ಮುಖಂಡರ ಒತ್ತಡದ ಮೇರೆಗೆ ಈಗ ಜಾಗದ ಮಾಲೀಕರು ಸಮಾವೇಶಕ್ಕೆ ಜಾಗ ನೀಡಲು ಹಿಂದೇಟು ಹಾಕಿದ್ದಾರೆ. ಹಾಗಾಗಿ ಸಮಾವೇಶವನ್ನು ಬೇಲೂರು ರಸ್ತೆಯ ಆಶ್ರಯ ಮೈದಾನದಲ್ಲಿ ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಕಾಂಗ್ರೇಸ್ ಪರವಾಗಿ ಜನಾಭಿಪ್ರಾಯ ಮೂಡುತ್ತಿದ್ದು ಜಿಲ್ಲೆಯಲ್ಲಿಯೂ ಜನ ಸ್ವಯಂಪ್ರೇರಿತರಾಗಿ ಕಾಂಗ್ರೇಸ್ ಕಾರ್ಯಕ್ರಮಗಳಿಗೆ ಬರುತ್ತಿದ್ದಾರೆ. ಪ್ರಜಾಧ್ವನಿ ಯಾತ್ರೆಗೆ ಹಳ್ಳಿಹಳ್ಳಿಯಿಂದ ಜನ ಬರುತ್ತಿದ್ದಾರೆ, ಸಮಾವೇಶಕ್ಕೆ ಸಕಲ ರೀತಿಯಲ್ಲಿಯೂ ಸಿದ್ಧತೆ ನಡೆಸಲಾಗಿದೆ ಎಂದರು.