ಕಳಸ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ನಿತೇಶ್ ನನ್ನು ಚಿಕ್ಕಮಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇಂದು ಮಧ್ಯಾಹ್ನ ಕುದುರೆಮುಖ ಸರ್ಕಲ್ ಇನ್ಸ್ ಪೆಕ್ಟರ್ ರಮೇಶ್ ನೇತೃತ್ವದಲ್ಲಿ ಆರೋಪಿಯನ್ನು ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ತನ್ನ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ನಿತೀಶ್ ಊರಿನಿಂದ ನಾಪತ್ತೆಯಾಗಿದ್ದ. ಬಂಧನ ಬೀತಿ ಎದುರಿಸುತ್ತಿದ್ದ ನಿತೇಶ್ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಬಲೆಬೀಸಿ ಬಂಧಿಸಿದ್ದಾರೆ.
ಜನವರಿ 10 ರಂದು ತನ್ಮ ಮನೆಯಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಸಂಸೆ ಸಮೀಪದ ಜೋಗಿಕುಂಬ್ರಿ ಗ್ರಾಮದ ಚನ್ನಪ್ಪಗೌಡ ಎಂಬುವವರ ಮಗಳು 17 ವರ್ಷದ ದೀಪ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು.
ದೀಪ್ತಿ ಡೆತ್ ನೋಟ್ ನಲ್ಲಿ ಸ್ಥಳೀಯ ಬಜರಂಗದಳದ ಸಂಯೋಜಕನಾಗಿದ್ದ ನಿತೇಶ್ ಕಾರ್ಗದ್ದೆ ಹೆಸರು ಬರೆದಿದ್ದಳು.
ಈ ಸಂಬಂಧ ಕುದುರೆಮುಖ ಠಾಣೆಯಲ್ಲಿ ನಿತೇಶ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣ ಕಳಸ ಸುತ್ತಮುತ್ತ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿತ್ತು. ನಿತೇಶ್ ನನ್ನು ಬಜರಂಗದಳದಿಂದ ಹೊರಹಾಕಲಾಗಿತ್ತು. ಅಪ್ರಾಪ್ತ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ವಂಚಿಸಿ ಆಕೆಯ ಸಾವಿಗೆ ಕಾರಣನಾದ ನಿತೇಶ್ ನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜನರು ಒತ್ತಾಯಿಸಿದ್ದರು.
ಇದೀಗ ಪೊಲೀಸರು ನಿತೇಶ್ ನನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಿ ಕುದುರೆಮುಖಕ್ಕೆ ಕರೆದೊಯುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.