ಕದ್ದ ಹಣವನ್ನು ಪೊಲೀಸ್ ಠಾಣೆಯ ಸಮೀಪವೇ ಬಚ್ಚಿಡುತ್ತಿದ್ದ ಖತರ್ನಾಕ್ ಕಳ್ಳನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಹರಿಹರಪುರ, ಮಂಗಳೂರು, ಪುತ್ತೂರು, ಧರ್ಮಸ್ಥಳ, ಬೆಳ್ತಂಗಡಿ, ಕೊಡಗು ಸೇರಿದಂತೆ ವಿವಿಧ ಕಡೆ ಒಟ್ಟು 35 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ನಟೋರಿಯಸ್ ಕಳ್ಳ ಬೆಳ್ತಂಗಡಿ ತಾಲ್ಲೂಕಿನ ಮದ್ದಡ್ಕ ಗ್ರಾಮದ ಹಮೀದ್ ಕುಞ ಮೋನು (48 ವರ್ಷ) ಬಂಧಿತ ಆರೋಪಿ.
ಈತ ಜೇಬುಗಳ್ಳತನ, ಮನೆ ಕಳ್ಳತನ, ಅಂಗಡಿ ಕಳ್ಳತನಗಳನ್ನು ಮಾಡಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದ ಎನ್ನಲಾಗಿದೆ.
ತಾನು ಕಳ್ಳತನ ಮಾಡಿದ್ದ ಹಣದಲ್ಲಿ ಖರ್ಚಿಗೆ ಬೇಕಾದಷ್ಟು ಇಟ್ಟುಕೊಂಡು ಉಳಿದ ಹಣವನ್ನು ಮಂಗಳೂರು ಬಂದರು ಪೊಲೀಸ್ ಠಾಣೆಗೆ ಹೊಂದಿಕೊಂಡಂತೆ ಇರುವ ಪಾಳುಕಟ್ಟಡವೊಂದರಲ್ಲಿ ಬಚ್ಚಿಡುತ್ತಿದ್ದ ಎನ್ನಲಾಗಿದೆ.
ಬರೋಬ್ಬರಿ 9 ಲಕ್ಷ ಕದ್ದಿದ್ದ : 2022ರ ನವೆಂಬರ್ 16ರಂದು ಮಂಗಳೂರಿನ ಹೂವಿನ ವ್ಯಾಪಾರಿ ಉಮ್ಮರ್ ಎಂಬುವವರ ಅಂಗಡಿಯಲ್ಲಿ ಬರೋಬ್ಬರಿ 9 ಲಕ್ಷ ಕಳ್ಳತನವಾಗಿತ್ತು. ಈ ಕೇಸನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರಿಗೆ ಹಮೀದ್ ಸಿಕ್ಕಿಬಿದ್ದಿದ್ದ.
ತನಿಖೆಯಿಂದ ತಿಳಿದುಬಂದಿದ್ದೇನೆಂದರೆ ಹೂವಿನ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ 9 ಲಕ್ಷದಲ್ಲಿ ಸ್ವಲ್ಪ ಹಣವನ್ನು ತನ್ನ ಖರ್ಚಿಗೆ ಇಟ್ಟುಕೊಂಡು ಉಳಿದ ಹಣವನ್ನು ಪಾಳುಕಟ್ಟಡದಲ್ಲಿ ಬಚ್ಚಿಟ್ಟಿದ್ದನು. ಅವನು ಊರಿಂದ ಮರಳುವ ವೇಳೆಗೆ ಆ ಕಟ್ಟಡ ನೆಲಸಮವಾಗಿತ್ತು. ಎಷ್ಟೇ ಹುಡುಕಿದರು ಆತನಿಗೆ ಹಣಸಿಗದೇ ಇದ್ದಾಗ ಅಲ್ಲಿಂದ ಜಾಗ ಖಾಲಿ ಮಾಡಿದ್ದ.
ಹಣವನ್ನು ತೆಗೆದುಕೊಂಡಿದ್ದ ಜೇಸಿಬಿ ಡ್ರೈವರ್: ಪಾಳುಕಟ್ಟಡ ನೆಲಸಮ ಮಾಡುತ್ತಿದ್ದ ಜೇಸಿಬಿ ಡ್ರೈವರ್ ಗೆ ಈ ಹಣ ಸಿಕ್ಕಿತ್ತು. ಆ ವಿಚಾರವನ್ನು ಗುಟ್ಟಾಗಿ ಇಟ್ಟು ಅದರಲ್ಲಿ ಸಾಕಷ್ಟು ಹಣವನ್ನು ಜೇಸಿಬಿ ಡ್ರೈವರ್ ಖರ್ಚು ಮಾಡಿದ್ದ. ಕೊನೆಗೆ 5.80 ಲಕ್ಷ ಹಣವನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.
ದಕ್ಷಿಣ ಕನ್ನಡ ಮತ್ತು ಹೊರ ಜಿಲ್ಲೆಗಳಲ್ಲಿ ಕದ್ದ ಹಣಗಳನ್ನ ಇದೇ ಜಾಗದಲ್ಲಿ ಬಚ್ಚಿಡುತ್ತಿದ್ದ ಮಾಹಿತಿ ಲಭ್ಯವಾಗಿದೆ. ಮಂಗಳೂರು ಬಂದರು ಪೊಲೀಸ್ ಠಾಣೆಯ ಅನತಿ ದೂರದ ಜಾಗವನ್ನೇ ಕಳ್ಳನು ಸೇಫ್ ಲಾಕರ್ ಮಾಡಿಕೊಂಡಿದ್ದನು. ಇನ್ನು ಚಾಲಾಕಿ ಕಳ್ಳ ಹಮೀದ್ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ, ಹೊರ ಜಿಲ್ಲೆಗಳಲ್ಲಿಯೂ ತನ್ನ ಕೈಚಳಕ ತೋರಿಸುತ್ತಿದ್ದನು.
ಒಟ್ಟಾರೆ 35ಕ್ಕೂ ಹೆಚ್ಚು ಸರಣಿ ಕಳ್ಳತನದಲ್ಲಿ ಹಮೀದ್ ಕುಂಞ ಮೋನು ಪೊಲೀಸರಿಗೆ ಬೇಕಾಗಿದ್ದನು. ಹಮೀದ್ ಕುಂಞ ಮೋನು ಮೇಲೆ ಸುಮಾರು 22 ಬಂಧನ ವಾರಂಟ್ ಜಾರಿಯಾಗಿತ್ತು. ಪುತ್ತೂರು ನಗರ, ಉಪ್ಪಿನಂಗಡಿ, ಚಿಕ್ಕಮಗಳೂರು, ವೇಣೂರು, ಬೆಳ್ತಂಗಡಿ, ಶೃಂಗೇರಿ, ಮೂಡಿಗೆರೆ, ಧರ್ಮಸ್ಥಳ ಸೇರಿ ಹಲವು ಠಾಣೆಗಳಲ್ಲಿ ಕೇಸ್ಗಳಿದ್ದವು. ಹೂವಿನ ವ್ಯಾಪಾರಿಯ ಮಳಿಗೆಯಲ್ಲಿ ಹಣ ಕಳ್ಳತನ ಮಾಡಿರುವ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.