ಮೂಡಿಗೆರೆ ರೋಟರಿ ಕ್ಲಬ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸೈಂಟ್ ಮಾರ್ಥಾಸ್ ವಿದ್ಯಾಸಂಸ್ಥೆ ಮೂಡಿಗೆರೆ ವತಿಯಿಂದ ಪಟ್ಟಣದ ಸೈಂಟ್ ಮಾರ್ಥಾಸ್ ಶಾಲೆಯ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು.
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ ? ಮತ್ತು ಎಸ್.ಎಸ್.ಎಲ್.ಸಿ. ನಂತರ ಮುಂದೇನು ? ಎಂಬ ವಿಚಾರವಾಗಿ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಾಗಾರವನ್ನು ರೋಟರಿ ಕ್ಲಬ್ ಮೈಸೂರು ಮಿಡ್ ಟೌನ್ ಸದಸ್ಯರಾದ ಭೀಮೇಶ್ ಮತ್ತು ರಘು ನಡೆಸಿಕೊಟ್ಟರು. ಪರೀಕ್ಷೆಯನ್ನು ಎದುರಿಸುವುದು ಹೇಗೆ ?, ಆತ್ಮವಿಶ್ವಾಸ. ನೆನಪಿನ ಶಕ್ತಿ, ಉತ್ತಮ ಬರವಣಿಗೆ ಮುಂತಾದ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಆಧ್ಯಕ್ಷತೆಯನ್ನು ಮೂಡಿಗೆರೆ ರೋಟರಿ ಅಧ್ಯಕ್ಷ ಪ್ರದೀಪ್ ದುಂಡುಗ ವಹಿಸಿದ್ದರು.
ರೋಟರಿ ಕ್ಲಬ್ ಕಾರ್ಯದರ್ಶಿ ವರುಣ್, ರೋಟರಿ ಮಾಜಿ ಜಿಲ್ಲಾ ರಾಜ್ಯಪಾಲ ಡಿ.ಎಸ್. ರವಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಾಂತಕುಮಾರ್, ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಮತಿ ಪ್ರಣತಿ ಅಡ್ಯಂತಾಯ, ಸೈಂಟ್ ಮಾರ್ಥಾಸ್ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಗೀತಾ ಪಿಂಟೋ, ಶಿಕ್ಷಣ ಇಲಾಖೆಯ ಶ್ರೀಮತಿ ಸ್ಮಿತಾ, ರೋಟರಿ ವಲಯಾಧಿಕಾರಿ ವಿನೋಧ್ ಕುಮಾರ್ ಶೆಟ್ಟಿ, ಕೆ.ಎಲ್.ಎಸ್. ತೇಜಸ್ವಿ, ನರೇಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
ಈ ತರಬೇತಿ ಕಾರ್ಯಾಗಾರವನ್ನು ಕಳೆದ ಹಲವು ವರ್ಷಗಳಿಂದ ದಿವಂಗತ ರೋಟೇರಿಯನ್ ಜಯರಾಮ ಅಡ್ಯಂತಾಯ ಮತ್ತು ರೋಟೇರಿಯನ್ ರಿತೇಶ್ ಅಡ್ಯಂತಾಯ ಅವರ ಸ್ಮರಣಾರ್ಥ ಕೊಲ್ಲಿಬೈಲ್ ಎಸ್ಟೇಟ್ ಮಾಲೀಕರಾದ ಮುಕ್ತಮಣಿ ಅಡ್ಯಂತಾಯ ಮತ್ತು ಪ್ರಣತಿ ಅಡ್ಯಂತಾಯ ಪ್ರಾಯೋಜಕತ್ವ ವಹಿಸುತ್ತಿದ್ದಾರೆ.