ಕನ್ನಡದ ಹಿರಿಯ ಸಾಹಿತಿ, ಮಹಿಳಾಪರ ಚಿಂತಕಿ ಶ್ರೀಮತಿ ಸಾರಾ ಅಬೂಬಕರ್ (86 ವರ್ಷ) ನಿಧನ ಹೊಂದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ 1ರ ಹೊತ್ತಿಗೆ ಮಂಗಳೂರಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
1936ರಲ್ಲಿ ಗಡಿನಾಡು ಕಾಸರಗೋಡಿನ ಮಲೆಯಾಳಂ ಮಾತನಾಡುವ ಕುಟುಂಬದಲ್ಲಿ ಜನಿಸಿದ ಸಾರಾ ಕನ್ನಡದ ಲೇಖಕಿಯಾಗಿ ಗುರುತಿಸಿಕೊಂಡಿದ್ದು ವಿಶೇಷ.
ಅವರು 10 ಕಾದಂಬರಿಗಳು, 6 ಕಥಾಸಂಕಲನ, 5 ಭಾನುಲಿ ನಾಟಕಗಳು, ಅನೇಕ ಲೇಖನಗಳು, ಪ್ರವಾಸಕಥನಗಳನ್ನು ರಚಿಸಿದ್ದಾರೆ. ಅವರ ಪ್ರಥಮ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು.
ಬಂಡಾಯ ಮನೋಭಾವನೆಯನ್ನು ಹೊಂದಿದ್ದ ಸಾರಾ ಸಮಾಜದಲ್ಲಿ ಕಂಡುಬಂದಿದ್ದ ಅನೇಕ ಅಂಧಚಾರಣೆಗಳ ವಿರುದ್ಧ ತಮ್ಮ ಲೇಖನದಲ್ಲಿ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದರು. ಮಹಿಳಾ ಸಮಾನತೆಗಾಗಿ ಧ್ವನಿ ಎತ್ತಿದ್ದರು.
ಸಾರಾ ಅವರ ಸರಳ ಬರವಣಿಗೆ ಶೈಲಿ ಓದುಗರಿಗೆ ಮುದ ನೀಡುವಂತಿದ್ದು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.
ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ.