ನಮ್ಮ ಚಿಕ್ಕಮಗಳೂರು ಜಿಲ್ಲೆಯ ಪ್ರತಿಭಾನ್ವಿತ ಹಿರಿಯ ರಂಗಕರ್ಮಿ ಶೃಂಗೇರಿಯ ರಮೇಶ್ ಬೇಗಾರ್ ನಿರ್ದೇಶನ ಮಾಡಿರುವ ವೈಶಂಪಾಯನ ತೀರ ಸಿನಿಮಾ ಜನವರಿ 6ರಂದು ರಾಜ್ಯದಾದ್ಯಂತ ತೆರೆ ಕಂಡಿದೆ.
ಸ್ವರಸಂಗಮ ಎಂಟರ್ಟೈನ್ ಮೆಂಟ್ ಬ್ಯಾನರ್ ನಲ್ಲಿ ಆರ್. ಸುರೇಶ್ ಬಾಬು ನಿರ್ಮಿಸಿರುವ ಸಿನಿಮಾ ವಿಶಿಷ್ಠ ಕಥಾ ಹಂದರವನ್ನು ಹೊಂದಿದ್ದು, ಕನ್ನಡದ ಸಿನಿಪ್ರಿಯರ ಗಮನ ಸೆಳೆದಿದೆ.
“ವೈಶಂಪಾಯನ ತೀರ” ಎಂಬ ಆಕರ್ಷಕ ವಿಶಿಷ್ಟ ಹೆಸರು ಗಮನ ಸೆಳೆದಿದೆ. ಸಿನಿಮಾ ನಿರ್ಮಾಣವು ಕಾಂತಾರ ಸಿನಿಮಾದ ಶೈಲಿಯಲ್ಲೇ ಇದ್ದು ಕಾಂತಾರದ ಹಾದಿಯಲ್ಲಿಯೇ ಸಾಗುವ ಭರವಸೆ ಮೂಡಿಸಿದೆ. ವಿಮರ್ಷಕರಿಂದ ಮತ್ತು ಸಿನಿಪ್ರಿಯರಿಂದ ಮೆಚ್ಚುಗೆ ಗಳಿಸುತ್ತಿದೆ.
ಪ್ರಸಿದ್ಧ ಕಥಾಲೇಖಕ ಮಹಾಬಲ ಮೂರ್ತಿ ಕೊಡ್ಲೆಕೆರೆ ಇವರ ಜನಪ್ರಿಯ ಸಣ್ಣಕತೆಯನ್ನು ಆದರಿಸಿದ ಈ ಚಿತ್ರ ಯಕ್ಷಗಾನ ಕಲೆಯ ಹಿನ್ನೆಲೆಯಲ್ಲಿ ಸಾಗುವ, ವೈಯುಕ್ತಿಕ ಬದುಕಿನ ಸಂಬಂಧಗಳ ನಿಗೂಢತೆಯನ್ನು ಬಿಂಬಿಸುವ, ಪ್ರಕೃತಿ-ಪುರುಷನ ಸಂಘರ್ಷವನ್ನು ಹೇಳುವ ನವಿರಾದ ಕಥೆಯಾಗಿದೆ.
ವಿಶೇಷವೆಂದರೆ ಸಿನಿಮಾದಲ್ಲಿ ನಮ್ಮ ಮಲೆನಾಡಿನ ಶೃಂಗೇರಿ ಭಾಗದ ಜನಜೀವನ, ಭಾಷೆ, ಸಂಸ್ಕøತಿಯನ್ನು ಅಳವಡಿಸಲಾಗಿದ್ದು ಮಣ್ಣಿನ ಮೂಲಸೊಗಡಿನ ಚಿತ್ರವಾಗಿ ಮೂಡಿಬಂದಿದೆ. ಬಹುತೇಕ ಚಿತ್ರಿಕರಣ ಶೃಂಗೇರಿ ಭಾಗದ ಸುಂದರ ಪರಿಸರದಲ್ಲಿ ನಡೆದಿದೆ. ಸಿನಿಮಾದ ಪಾತ್ರದಾರಿಗಳು, ಸಂಗೀತ ಸಂಯೋಜನೆ ಮತ್ತು ಹಾಡಿರುವವರು ನಮ್ಮ ಜಿಲ್ಲೆಯ ಕಲಾವಿದರೆ ಆಗಿದ್ದಾರೆ.
ಚಿತ್ರದ ಪ್ರಮುಖ ಪಾತ್ರಗಳು ಕೃಷ್ಣಭಟ್ಟ, ವೆಂಕಪ್ಪ ಹೆಗ್ಡೆ ಮತ್ತು ಕಲ್ಯಾಣಿ. ಇವುಗಳನ್ನು ಕ್ರಮವಾಗಿ ರವೀಶ್ ಹೆಗ್ಡೆ ಐನ್ ಬೈಲು, ಪ್ರಸನ್ನ ಶೇಟ್ಟಿಗಾರ್ ಮತ್ತು ವೈಜಯಂತಿ ಅಡಿಗ ನಿರ್ವಹಿಸಿದ್ದಾರೆ. ಕಥೆಯಲ್ಲಿ ಪೂರಕವಾದ ಮತ್ತೋಂದು ಟ್ರ್ಯಾಕ್ ಅಳವಡಿಸಿದ್ದು ಇದರಲ್ಲಿ ಪ್ರಮೋದ್ ಶೆಟ್ಟಿ, ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್, ಬಿ.ಎಲ್. ರವಿಕುಮಾರ್ ಮತ್ತು ನಾಗಶ್ರೀ ಬೇಗಾರ್ ಕಾಣಿಸಿಕೊಂಡಿದ್ದಾರೆ.
ವಿಶ್ವವಿಖ್ಯಾತ ರಂಗಭೂಮಿ ಹಾಸ್ಯ ಕಲಾವಿದರಾದ ಕುಂದಾಪುರದ ಕುಳ್ಳಪ್ಪ ಸಹೋದರರಾದ ಸತೀಶ್ ಪೈ, ಸಂತೋಷ್ ಪೈ ಮತ್ತು ಖ್ಯಾತ ಟಿ.ವಿ. ವಾರ್ತಾವಾಚಕ ಸುಬ್ರಮಣ್ಯ ಹಂಡಿಗೆ ಮೊದಲ ಬಾರಿ ಸಿನಿಮಾಕ್ಕಾಗಿ ಬಣ್ಣ ಹಚ್ಚಿರುವುದು ಚಿತ್ರದ ವಿಶೇಷ.
ರಮೇಶ್ ಭಟ್, ಗುರುರಾಜ ಹೊಸಕೋಟಿ, ಶೃಂಗೇರಿ ರಾಮಣ್ಣ ರಂತಹ ಹಿರಿಯ ಕಲಾವಿದರೂ ನಟಿಸಿರುವ ಚಿತ್ರವಿದು.
ಗುತ್ತಳಿಕೆ ಕೇಶವ, ನಯನ ಎ.ಎಸ್., ಸಸಿಮನೆ ವಿಶ್ವನಾಥ್, ಕೃಷ್ಣಮೂರ್ತಿ, ರಾಧಾಕೃಷ್ಣ, ಸ್ಪೂರ್ತಿ, ದೀಪ್ತಿ ಆರ್. ಭಟ್, ಅರೇಹಳ್ಳ, ವೈಶಾಲಿ, ಸ್ವಾತಿ, ಜ್ಯೋತಿ ಕಾಮತ್, ವೈಷ್ಣವಿ ಎನ್. ರಾವ್, ಪೃಥ್ವಿರಾಜ್, ಶಂಕರ್, ವಿವೇಕ್ ಸುಂಕುರ್ಡಿ, ವಿಶ್ವನಾಥ ಶೆಟ್ಟಿ ಮೊದಲಾದ ಮೆಲೆನಾಡ ಪ್ರತಿಭಾವಂತ ರಂಗಕಲಾವಿದರ ದಂಡೇ ಈ ಚಿತ್ರದಲ್ಲಿದೆ.
ಶ್ರೀನಿಧಿ ಕೊಪ್ಪ ಸಂಯೋಜಿಸಿದ ಮೂರು ಹಾಡುಗಳನ್ನು ಸಾಧ್ವಿನಿಕೊಪ್ಪ ಮತ್ತು ವಿನಯ್ ಶೃಂಗೇರಿ ಹಾಡಿದ್ದಾರೆ. ಹಿನ್ನಲೆ ಸಂಗೀತವನ್ನು ವಿನುಮನಸು ಅವರು ಒದಗಿಸಿದ್ದಾರೆ. ಶಶೀರ ಶೃಂಗೇರಿ ಛಾಯಗ್ರಹಣ, ಅವಿನಾಶ್ ಶೃಂಗೇರಿ ಸಂಕಲನ, ಅಭಿಷೇಕ್ ಹೆಬ್ಬಾರ್ ಕಲಾ ನಿರ್ದೇಶನ, ರಾಮಚಂದ್ರ ಅವರ ಸಹ ನಿರ್ದೇಶನ, ಕಾರ್ತಿಕ್ ನಿರ್ವಹಣೆಯನ್ನು ಸಿನಿಮಾ ಹೊಂದಿದೆ.
ತಂತ್ರಜ್ಞರೆಲ್ಲರೂ ನಮ್ಮ ಮಲೆನಾಡಿನವರು ಎಂಬುದು ಸಿನಿಮಾದ ವಿಶೇಷ.
ಬಿಡುಗಡೆಯಾಗಿ ಮೂರು ದಿನದಲ್ಲಿಯೇ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಮ್ಮ ಜಿಲ್ಲೆಯ ಪ್ರತಿಭೆಗಳು ಸೇರಿ ಮಾಡಿರುವ ವೈಶಂಪಾಯನ ತೀರ ಸಿನಿಮಾ ಸದ್ದಿಲ್ಲದೆ ಸುದ್ದಿ ಮಾಡಿದೆ.
ನಾವೆಲ್ಲ ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡುವ ಮೂಲಕ ಪ್ರೋತ್ಸಾಹಿಸೋಣ. ಸಿನಿಮಾ ಅದ್ಭುತ ಯಶಸ್ಸು ಗಳಿಸಲಿ ಎಂದು ಜಿಲ್ಲೆಯ ಜನತೆಯ ಪರವಾಗಿ ಪತ್ರಿಕೆಯ ಮೂಲಕ ಶುಭಹಾರೈಸುತ್ತೇವೆ.