ಚಿಕ್ಕಮಗಳೂರು ಪೊಲೀಸರು ರಾತ್ರಿ ವೇಳೆ ನಗರದ ಗಸ್ತು ತಿರುಗುವ ವೇಳೆ ಖತರ್ನಾಕ್ ದರೋಡೆಕೋರನೊಬ್ಬ ಬಲೆಗೆ ಬಿದ್ದಿದ್ದಾನೆ.
ಚಿಕ್ಕಮಗಳೂರು ನಗರದ ಉಪ್ಪಳ್ಳಿ ನಿವಾಸಿ ಅಹ್ಮದ್ ಕಬೀರ್ ಬಂದಿತ ಆರೋಪಿ.
ಸಂಶಯದ ಮೇಲೆ ಕಾರು ನಿಲ್ಲಿಸಿ ವಿಚಾರಿಸಿದಾಗ ಆತನ ಬಳಿಯಿದ್ದ ವಸ್ತುಗಳನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. ಪೊಲೀಸರು ಠಾಣೆಗೆ ಕರೆತಂದು ಚೆಕ್ ಮಾಡಿದಾಗ ಇವನೊಬ್ಬ ದರೋಡೆ ಕೋರ ಅನ್ನೋದು ಗೊತ್ತಾಗಿದೆ.
ಕಬೀರ್ ಬಳಿ ಪಿಸ್ತೂಲ್ ಹಾಗೂ 12 ಜೀವಂತ ಗುಂಡುಗಳ ಎರಡು ಮ್ಯಾಗ್ಜಿನ್ ಇದ್ದವು. ಕಾರಲ್ಲಿ ಕಬ್ಬಿಣದ ರಾಡ್, ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌಸ್ ಎಲ್ಲವೂ ಇದ್ದವು.
ಹಗಲಲ್ಲಿ ಹಣ್ಣಿನ ವ್ಯಾಪಾರ – ರಾತ್ರಿ ದರೋಡೆ.
ಅಹ್ಮದ್ ಕಬೀರ್ರಾ ತ್ರಿ ಮನೆ ಕಳ್ಳತನ ಮಾಡುವ ಕೆಲಸ ಮಾಡಿದರೆ, ಬೆಳಿಗ್ಗೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದನು.
ಚಿಕ್ಕಮಗಳೂರು ನಗರದ ನಗರ ಠಾಣೆಯಲ್ಲೇ ಈತನ ಮೇಲೆ 9 ಕೇಸ್ ಗಳಿವೆ. ಶಿವಮೊಗ್ಗ ಹಾಗೂ ಬಾಳೆಹೊನ್ನೂರಿನಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಪೊಲೀಸರು ಕೇಳಿದರೆ ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತೇನೆ ಎಂದು ಉತ್ತರಿಸಿದ್ದಾನೆ. ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದು, ಆಗಾಗ ಚಿಕ್ಕಮಗಳೂರಿಗೆ ಬಂದು ದರೋಡೆ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದ ಎನ್ನಲಾಗಿದೆ.
ಹಣ್ಣಿನ ವ್ಯಾಪಾರಿ ಬಳಿ ಗನ್ ಎಲ್ಲಿಂದ ಬಂತು?: ಹಣ್ಣಿನ ವ್ಯಾಪಾರಿಗೆ ಗನ್ ಎಲ್ಲಿ ಸಿಕ್ತು ಅಂತ ಪೊಲೀಸರು ತನಿಖೆ ಮಾಡಿದಾಗ, ಬೆಂಗಳೂರಿನ ಡಿ.ಜೆ.ಹಳ್ಳಿಯ ಕಾರ್ಪೆಂಟರ್ ವಾಸೀಮ್ ಎಂಬುವನ ಕಡೆಯಿಂದ ಗನ್ ಪಡೆದುಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. ಪೊಲೀಸರು ಈಗ ವಾಸೀಮ್ ಹಿಂದೆ ಬಿದ್ದಿದ್ದಾರೆ.
ಬಂದಿತನಿಂದ ಸುಮಾರು 20 ಲಕ್ಷ ಮೌಲ್ಯದ 292 ಗ್ರಾಂ ಬಂಗಾರ, 300 ಗ್ರಾಂ ಬೆಳ್ಳಿ, ಒಂದು ಕಾರು ಹಾಗೂ ಬೈಕನ್ನ ವಶಪಡಿಸಿಕೊಂಡಿದ್ದಾರೆ. ಈತನ ಮೇಲೆ ಕೇವಲ ಚಿಕ್ಕಮಗಳೂರಷ್ಟೆ ಬೇರೆ ಕಡೆಯೂ ಪ್ರಕರಣಗಳಿರಬಹುದು ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.