ಮೂಡಿಗೆರೆ ಪಟ್ಟಣದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ, ಶ್ರೀ ಪಂಚಮುಖಿ ಗಣಪತಿ, ಶ್ರೀ ಮಹಾಲಕ್ಷ್ಮಿ, ಶ್ರೀ ಆಂಜನೇಯ ದೇವರ ಸಮುಚ್ಚಯದ ಆವರಣದಲ್ಲಿ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನದ ಸಮಿತಿ ವತಿಯಿಂದ ಸೋಮವಾದಿಂದ ಶ್ರೀ ಶ್ರೀನಿವಾಸ ತಿರುಕಲ್ಯಾಣ ಹಾಗೂ ವೈಕುಂಠ ಏಕಾದಶಿ ಕಾರ್ಯಕ್ರಮ ಆರಂಭಿಸಲಾಯಿತು.
ಸೋಮವಾರ ವೈಕುಂಠ ಏಕಾದಶಿ ಕಾರ್ಯಕ್ರಮದ ಪ್ರಯುಕ್ತ ಶ್ರೀ ಸ್ವಾಮಿಗೆ ಪ್ರಾತಃಕಾಲ ಸುಪ್ರಭಾತ ಸೇವೆ, ಶಂಖಧಾರ, ಚಕ್ರದಾರ, ಸಹಸ್ರಧಾರ ಅಭಿಷೇಕ ನಂತರ ವೈಕುಂಠ ದ್ವಾರ ಪೂಜೆ, ಸರ್ವಾಲಂಕಾರ ಭರಿತವಾದ ಶ್ರೀ ವೇಣುಗೋಪಾಲಸ್ವಾಮಿಯವರ ಉತ್ಸವದೊಂದಿಗೆ ವೈಕುಂಠದ್ವಾರ ಪ್ರವೇಶವಿರುತ್ತದೆ. ಅಷ್ಟಾವಧಾನ ಸೇವೆಯೊಂದಿಗೆ ಮಹಾಮಂಗಳಾರತಿ ನಂತರ ಭಕ್ತರು ಶ್ರೀ ಸ್ವಾಮಿಯ ದರ್ಶನ ಪಡೆದರು.
ಇಂದು ಮುಕ್ಕೋಟಿ ದ್ವಾದಶಿ ಪ್ರಯುಕ್ತ ಬೆಳಿಗ್ಗೆ 11,00 ಗಂಟೆಗೆ ಶ್ರೀಸತ್ಯನಾರಾಯಣ ಸ್ವಾಮಿ ಪೂಜೆ ನಂತರ ಸಂಜೆ 6 ಗಂಟೆಗೆ ವಿಷ್ಣು ಸಹಸ್ರನಾಮದೊಂದಿಗೆ ತುಳಸಿ ಅರ್ಚನೆ, ಉತ್ಸವದ ನಂತರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ.
ಬುಧವಾರ ಶ್ರೀ ಶ್ರೀನಿವಾಸ ತಿರುಕಲ್ಯಾಣೋತ್ಸವ ಬೆಳಗ್ಗೆ 8,30 ಗಂಟೆಗೆ ಸ್ವಸ್ತಿವಾಚನ, ನಾಂದಿ, ವಿಶ್ವಕ್ಷೆನ ಆರಾಧನೆ, ಆಚಾರ್ಯ ಋತ್ವಿಕ್ಚರಣ 9,30ಕ್ಕೆ ಮಂಗಳ ದ್ರವ್ಯ ಪೂಜೆ, ನಿಶ್ಚಿತಾರ್ಥದೊಂದಿಗೆ ಶ್ರೀ ಶ್ರೀನಿವಾಸ ಸ್ವಾಮಿಯವರ ಕಲ್ಯಾಣೋತ್ಸವ ಸೇವೆ ನಡೆಯಲಿದೆ. 12,30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಅಂದು ಖ್ಯಾತ ಸಾಹಿತಿ ಹಿರೇಮಗಳೂರು ಕಣ್ಣನ್ ಭಾಗವಹಿಸಲಿದ್ದಾರೆಂದು ದೇವಸ್ಥಾನದ ಸಮಿತಿ ತಿಳಿಸಿದೆ.