ಬೆಂಗಳೂರು-ಮಂಗಳೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಎನ್.ಹೆಚ್-75ರಲ್ಲಿ ಶಿರಾಡಿ ಘಾಟ್ ನಲ್ಲಿ ಬರುವ ಮಾರನಹಳ್ಳಿಯಿಂದ ಅಡ್ಡಹೊಳೆ ನಡುವೆ ನಾಲ್ಕು ಪಥದ ರಸ್ತೆ ಅಭಿವೃದ್ಧಿಪಡಿಸಲು ರೂ. 1,976 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಬಗ್ಗೆ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿರುವ ಗಡ್ಕರಿ ಸಕಲೇಶಪುರದಿಂದ ಮಾರನಹಳ್ಳಿಯವರೆಗೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹೆದ್ದಾರಿಯನ್ನು ತಕ್ಷಣವೇ ದುರಸ್ತಿ ಮಾಡಲಾಗುತ್ತದೆ. ದುರಸ್ತಿ ಕಾಮಗಾರಿಗೆ ರೂ.12.20 ಕೋಟಿ ಅಂದಾಜು ವೆಚ್ಚವಾಗಲಿದೆ. ಇದರ ಟೆಂಡರ್ ಗಳ ಮೌಲ್ಯಮಾಪನ ಮಾಡಲಾಗುತ್ತಿದೆ. ಗುಂಡಿ ಮುಚ್ಚುವ ಕಾಮಗಾರಿಯನ್ನು ಈ ಗುತ್ತಿಗೆದಾರರೇ ನಿರ್ವಹಿಸಲಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮತ್ತೆ ಸುರಂಗ ಮಾರ್ಗದ ಪ್ರಸ್ತಾಪ :
ಈಗ್ಗೆ ತಿಂಗಳ ಹಿಂದೆ ಲೋಕಸಭೆಯಲ್ಲಿ ನಳೀನ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ನಿತಿನ್ ಗಡ್ಕರಿಯವರು ಶಿರಾಡಿ ಘಾಟ್ ಸುರಂಗ ಮಾರ್ಗದ ಪ್ರಸ್ತಾಪನೆಯನ್ನು ಕಾರ್ಯಸಾದುವಲ್ಲ ಎಂದು ಕೈಬಿಡಲಾಗಿದೆ ಎಂದು ಹೇಳಿದ್ದರು. ಆದರೆ ಇದೀಗ ನಳೀನ್ ಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಮತ್ತೆ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾಪ ಮಾಡಿದ್ದಾರೆ.
ಪತ್ರದಲ್ಲಿ ಅವರು ಬರೆದಿರುವಂತೆ ಚತುಷ್ಪತ ರಸ್ತೆ ಕಾಮಗಾರಿಯ ಜೊತೆಗೆ ಮಂಗಳೂರು-ಬೆಂಗಳೂರು ನಡುವಿನ ಸಂಚಾರಕ್ಕೆ ತಗಲುವ ಪ್ರಯಾಣ ವೆಚ್ಚವನ್ನು ಕಡಿತಗೊಳಿಸಲು ಸಲುವಾಗಿ ಶಿರಾಡಿ ಘಾಟಿಯಲ್ಲಿ 23 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾಪವೂ ಇದೆ.
ರೂ. 15 ಸಾವಿರ ಕೋಟಿ ವೆಚ್ಚದ ಈ ಕಾಮಗಾರಿಗೆ 2023ರ ಏಪ್ರಿಲ್ ಒಳಗೆ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ಅಂತಿಮಗೊಳಿಸಿ, ಮೇ ತಿಂಗಳಿನಲ್ಲಿ ಟೆಂಡರ್ ಆಹ್ವಾನಿಸಲಾಗುವುತ್ತದೆ ಎಂದು ತಿಳಿಸಿದ್ದಾರೆ.