ಮಲೆನಾಡು ಭಾಗದ ರೈತರಿಗೆ ವರದಾನವಾಗುವ ಒತ್ತುವರಿ ಭೂಮಿಯನ್ನು ಗುತ್ತಿಗೆಗೆÉ ನೀಡುವ ಕಾಯ್ದೆಯು ವಿಧಾನಮಂಡಲದಲ್ಲಿ ಅನುಮೋದನೆ ಪಡೆದಿದೆ.
ರಾಜ್ಯದ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಫಿ, ಅಡಿಕೆ, ಏಲಕ್ಕಿ, ರಬ್ಬರ್ ಬೆಳೆಗಳನ್ನು ಅನಧಿಕೃತವಾಗಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಬೆಳೆದಿರುವವರಿಗೆ ಈ ಕಾಯ್ದೆ ಪ್ರಮುಖವಾಗಿ ಸಹಾಯಕವಾಗಿದೆ.
ಮೊನ್ನೆ ವಿಧಾನಪರಿಷತ್ತಿನಲ್ಲಿ ಈ ಕಾಯ್ದೆಯನ್ನು (ಕರ್ನಾಟಕ ಲ್ಯಾಂಡ್ ರೆವೆನ್ಯೂ ಕಾಯ್ದೆ-2022) ಕಂದಾಯ ಸಚಿವ ಆರ್. ಅಶೋಕ್ ಮಂಡಿಸಿದ್ದು ವಿಧಾನಪರಿಷತ್ ಸರ್ವಾನುಮತದಿಂದ ಅನುಮೋದನೆ ನೀಡಿತ್ತು. ನಿನ್ನೆ ವಿಧಾನಸಭೆಯಲ್ಲಿ ಈ ಕಾಯ್ದೆಯನ್ನು ಮಂಡಿಸಿದ್ದು ಅಲ್ಲಿಯೂ ಚರ್ಚೆಯ ಬಳಿಕ ಅನುಮೋದನೆ ನೀಡಲಾಗಿದೆ.
ಕಾಯ್ದೆಯ ಪ್ರಮುಖ ಅಂಶಗಳ ಬಗ್ಗೆ ವಿವರಿಸಿರುವ ಆರ್. ಅಶೋಕ್ ರವರು
- ಇದು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆದಿರುವ ರೈತರಿಗೆ ಅನ್ವಯವಾಗುತ್ತದೆ.
- ಒಂದು ಕುಟುಂಬಕ್ಕೆ ಗರಿಷ್ಠ 25 ಎಕರೆ ಜಮೀನು ಗುತ್ತಿಗೆ ಆಧಾರದಲ್ಲಿ ನೀಡಲಾಗುವುದು.
- 2005ಕ್ಕಿಂತ ಹಿಂದಿನಿಂದ ಸಾಗುವಳಿ ಮಾಡಿದವರಿಗೆ ಮಾತ್ರ ಈ ಕಾಯ್ದೆಯಡಿ ಭೂಮಿ ಗುತ್ತಿಗೆ ನೀಡಲಾಗುವುದು.
- ಕಂದಾಯ ಭೂಮಿ ಒತ್ತುವರಿಗೆ ಮಾತ್ರ ಈ ಕಾಯ್ದೆ ಅನ್ವಯವಾಗುತ್ತದೆ. ಅರಣ್ಯ ಭೂಮಿಗೆ ಅನ್ವಯವಾಗುವುದಿಲ್ಲ.
- 2005ಕ್ಕಿಂತ ಹಿಂದಿನಿಂದ ಒತ್ತುವರಿ ಮಾಡಿರುವವರು ಗುತ್ತಿಗೆ ಪಡೆಯಲು ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು.
ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ ರೂ. 2000-00(ಎರಡು ಸಾವಿರ)ರಂತೆ 30 ವರ್ಷಗಳಿಗೆ ಗುತ್ತಿಗೆ ನೀಡಲಾಗುವುದು. 30 ವರ್ಷದ ಪೂರ್ಣ ಗುತ್ತಿಗೆ ಹಣವನ್ನು ಆರಂಭದಲ್ಲಿಯೇ ಸರ್ಕಾರಕ್ಕೆ ಪಾವತಿಸಬೇಕು ಎಂದು ಪ್ರಸ್ತಾಪ ಮಾಡಲಾಗಿತ್ತು. ಆದರೆ ಒಂದೇ ಬಾರಿ ಅಷ್ಟು ಮೊತ್ತವನ್ನು ಕಟ್ಟುವ ವಿಚಾರವಾಗಿ ಆಕ್ಷೇಪ ವ್ಯಕ್ತವಾಗಿರುವುದರಿಂದ ಆ ಬಗ್ಗೆ ಇನ್ನೂ ಸರ್ಕಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
ಈ ಕಾಯ್ದೆಯಿಂದ ರಾಜ್ಯದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ಹಿಂದಿನಿಂದಲೂ ಮಲೆನಾಡಿನಲ್ಲಿ ರೈತರು ತಮ್ಮ ಜಮೀನಿಗೆ ಹೊಂದಿಕೊಂಡಂತೆ ಇರುವ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿದ್ದಾರೆ. ಈ ಹಿಂದೆ ಅಂತಹ ಭೂಮಿಯನ್ನು ದಾಖಲೆ ಮಾಡಿಕೊಳ್ಳಲ ದರ್ಖಾಸು ಕಾನೂನು ಜಾರಿಯಲ್ಲಿತ್ತು. ಆ ಕಾಯ್ದೆ ಈಗ ಜಾರಿಯಲ್ಲಿ ಇಲ್ಲ.
ಈಗ ಇರುವ ಫಾರಂ ನಂ-53, 57 ಗಳಲ್ಲಿ ಗರಿಷ್ಠ 4.38 ಎಕರೆ ಭೂಮಿಯನ್ನು ಮಂಜೂರು ಮಾಡಿಕೊಳ್ಳಲು ಮಾತ್ರ ಅವಕಾಶವಿದೆ. ಹಾಗಾಗಿ ರೈತರು ಒತ್ತುವರಿ ಮಾಡಿ ಸಾಗು ಮಾಡಿದ್ದ ಭೂಮಿ ಯಾವಾಗ ಬೇಕಾದರೂ ಕೈಬಿಟ್ಟು ಹೋಗಬಹುದು ಎಂಬ ಆತಂಕದಲ್ಲಿದ್ದರು.
ಮಲೆನಾಡಿನ ಬಹುತೇಕ ಕಂದಾಯ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಎಂದು ಮಾಡಲಾಗಿದೆ. ಹಾಗಾಗಿ ಒತ್ತುವರಿ ಮಾಡಿರುವ ಬಹುತೇಕ ಜಮೀನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುತ್ತಿದೆ. ಸುಮಾರು ಆರೂವರೆ ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ನಿಂದ ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಒತ್ತುವರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಬೇಕು ಎಂಬುದು ಕಾಫಿನಾಡಿನ ರೈತರ ಬಹುದಿನಗಳ ಬೇಡಿಕೆಯಾಗಿತ್ತು. ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಈ ವಿಚಾರ ಪ್ರಸ್ತಾಪವಾಗಿತ್ತು. ಇದೀಗ ಈಗಿನ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ.
ಈ ಕಾಯ್ದೆಯನ್ನು ಸದನದಲ್ಲಿ ಯಾವುದೇ ಆಕ್ಷೇಪಗಳಲ್ಲದೇ ಎಲ್ಲಾ ಪಕ್ಷಗಳು ಒಮ್ಮತದಿಂದ ಅನುಮೋದನೆ ನೀಡಿವೆ.