ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪ ಕಾಡಾನೆ ದಾಳಿಯಿಂದ ಇಬ್ಬರು ಗಾಯಗೊಂಡಿದ್ದಾರೆ. ಬಣಕಲ್ ಸಬ್ಲಿ ರಸ್ತೆಯ ಬದಿಯಲ್ಲಿ ಗುಡಿಸಲು ಹಾಕಿದ್ದ ಅಲೆಮಾರಿ ಜನಾಂಗದ ಇಬ್ಬರ ಮೇಲೆ ಆನೆದಾಳಿ ಮಾಡಿದೆ. ಇಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆನೆದಾಳಿಯಿಂದ ಗಾಯಗೊಂಡವರನ್ನು 60 ವರ್ಷ ಆಸುಪಾಸಿನ ದಂಪತಿಗಳಾದ ಗುಂಡು ಗಸೈ ಮತ್ತು ನಾಗವಲ್ಲಿ ಎಂದು ಗುರುತಿಸಲಾಗಿದೆ. ಇವರಿಬ್ಬರು ಹಾಸನ ಜಿಲ್ಲೆ ಹಗರೆ ಮೂಲದವರು ಎನ್ನಲಾಗಿದೆ.
ಇಂದು ಬೆಳಗ್ಗಿನ ಜಾವ 4-30 ರ ಸಮಯದಲ್ಲಿ ಕಾಡಾನೆ ಕೋಗಿಲೆ, ಕೊಟ್ರಕೆರೆ ಕಡೆಯಿಂದ ಬಣಕಲ್ ಸಬ್ಲಿ ಕಡೆಗೆ ಹಾದುಹೋಗುವಾಗ ರಸ್ತೆಬದಿಯ ಗುಡಿಸಲಿನ ಮೇಲೆ ದಾಳಿ ಮಾಡಿದೆ. ಗುಡಿಸಲಿನಲ್ಲಿ ಮಲಗಿದ್ದ ಇಬ್ಬರ ಮೇಲೆ ದಾಳಿ ಮಾಡಿದೆ. ಜೋರಾಗಿ ಅರಚಿಕೊಂಡಿದ್ದು ಆನೆ ಅಲ್ಲಿಂದ ಕಾಲ್ಕಿತ್ತಿದೆ. ನಾಗವಲ್ಲಿ ಎಂಬುವವರಿಗೆ ಸೊಂಟಕ್ಕೆ ಪೆಟ್ಟಾಗಿದ್ದು, ಗುಂಡು ಗಸೈ ಮುಂಗಾಲಿನ ಮೇಲೆ ಆನೆ ಪಾದವಿಟ್ಟು ಗಾಯವಾಗಿದೆ.
ವಿಷಯ ತಿಳಿದು ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡವರನ್ನು ಬಣಕಲ್ ಸ್ನೇಕ್ ಆರೀಫ್ ಅಂಬುಲೆನ್ಸ್ ಮೂಲಕ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಗಾಯಗೊಂಡವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದಾರೆ.
ಪತ್ರಿಕೆಗೆ ಈ ಬಗ್ಗೆ ಮಾಹಿತಿ ನೀಡಿರುವ ಮೂಡಿಗೆರೆ ಎಸಿಎಫ್ ಡಾ. ರಾಜೇಶ್ ನಾಯಕ್ ಕಾಡಾನೆ ಗಡಿಸಲಿನ ಸಮೀಪ ಹಾದುಹೋಗಿದ್ದು, ಅಲ್ಲಿ ಮಲಗಿದ್ದ ಇಬ್ಬರಿಗೆ ಗಾಯವಾಗಿದೆ. ಇಬ್ಬರನ್ನು ಎಂ.ಜಿ.ಎಂ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುವುದು ಎಂದಿದ್ದಾರೆ.
ಆನೆ ಬೆಳಗಿನ ಜಾವ ದಾಳಿ ಮಾಡಿದ್ದು ಬೆಳಗಿನ ಜಾವ ಎದ್ದು ಹೊರಗಡೆ ಓಡಾಡುವವರು ಮತ್ತು ವಾಕಿಂಗ್ ಹೋಗುವವರು ಎಚ್ಚರಿಕೆಯಿಂದ ಇರಬೇಕು. ನಿನ್ನೆ ಬೆಳಗ್ಗಿನ ಜಾವ ತರೀಕೆರೆ ಸಮೀಪ ಹಾದಿಕರೆರೆಯಲ್ಲಿ ರೈತರೊಬ್ಬರನ್ನು ಕಾಡಾನೆ ತುಳಿದು ಸಾಯಿಸಿತ್ತು.
ಒಂಟಿ ಕೊಂಬಿನ ಆನೆ : ಈ ಭಾಗದಲ್ಲಿ ಸತತ ಮಾನವರ ಮೇಲೆ ದಾಳಿ ಮಾಡುತ್ತಿರುವುದು ಒಂಟಿಕೊಂಬಿನ ಆನೆ. ಒಂದು ಕೊಂಬು ಅರ್ಧಕ್ಕೆ ತುಂಡಾಗಿದ್ದು ನಿನ್ನೆಯೂ ಅದೇ ಆನೆ ದಾಳಿಮಾಡಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಕೊಟ್ರಕೆರೆ ಭಾಗದಲ್ಲಿ ಈ ಆನೆಯನ್ನು ನೋಡಿದ್ದಾರೆ. ಅದೇ ಆನೆ ಇಂದು ಬಣಕಲ್ ಕಡೆಗೆ ಸಾಗುವಾಗ ಈ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಈ ಆನೆಯೇ ಹೆಚ್ಚು ಉಪದ್ರವ ನೀಡುತ್ತಿದ್ದು ಇದನ್ನು ಹಿಡಿಯಲು ಅರಣ್ಯ ಇಲಾಖೆ ಮುತುವರ್ಜಿ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.