ಮುಂದಿನ ವಿಧಾನಸಭೆ ಚುನಾವಣೆಗೆ ಮೂಡಿಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಜೆಡಿಎಸ್ ಪಕ್ಷದಿಂದ ಟಿಕೇಟ್ ಆಕಾಂಕ್ಷಿಯಾಗಿದ್ದೆ. ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಪಕ್ಷದ ಅನೇಕ ಮುಖಂಡರು ನನ್ನನ್ನು ಬೆಂಬಲಿಸಿ ಪ್ರೋತ್ಸಾಹಿಸಿದ್ದರು. ಒಂದು ವೇಳೆ ಜೆಡಿಎಸ್ ಟಿಕೆಟ್ ಸಿಗದೇ ಇದ್ದರೆ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜನರ ಸೇವೆ ಮಾಡಲು ಸ್ಥಳೀಯ ನನ್ನ ಹಿತೈಷಿ ಮುಖಂಡರು ಸೂಚನೆ ನೀಡಿದರೆ ಹಾಗೂ ಜನರು ಅಪೇಕ್ಷೆ ಪಟ್ಟರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಬೇಡ ಎಂದರೆ ಹೋರಾಟದಲ್ಲಿಯೇ ಮುಂದುವರೆಯುತ್ತೇನೆಂದು ಕರುನಾಡು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರುದ್ರೇಶ್ ಕಹಳೆ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಟಿ.ವಿ. ಮಾಧ್ಯಮವೊಂದರಲ್ಲಿ ಮತದಾರರ ಸಮೀಕ್ಷೆ ನಡೆಸಿದಾಗ ಮೂಡಿಗೆರೆ ಕ್ಷೇತ್ರದ ಜನತೆ ತನ್ನ ಹೆಸರೇಳಿ ಶೇ.20 ರಷ್ಟು ಮತ ಹಾಕಿದ್ದಾರೆ. ತನ್ನ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ ಜನತೆಗೆ ಕೃತಜ್ಞತೆಗಳು ಸಲ್ಲಿಸುತ್ತೇನೆ.
ತಾನು 8 ತಿಂಗಳಿಂದ ಕ್ಷೇತ್ರ ಪ್ರವಾಸ ಮಾಡಿದ್ದೇನೆ. ಅನೇಕ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಕಾಫಿ ಬೆಳೆಗಾರರ, ಕೂಲಿ ಕಾರ್ಮಿಕರ ಸಮಸ್ಯೆ, ಡೀಮ್ಡ್ ಅರಣ್ಯ, ಕಾಡು ಪ್ರಾಣಿ ಹಾವಳಿ, ಅತಿವೃಷ್ಟಿ, ನಿವೇಶನದಂತಹ ಜ್ವಲಂತ ಸಮಸ್ಯೆಗಳು ಹಿಂದಿನಿಂದಲೂ ತಲೆ ಎತ್ತಿ ನಿಂತಿದೆ. ಅಲ್ಲದೇ ತಾಲೂಕು ಕಚೇರಿಯಲ್ಲಿ ಜನರ ಯಾವುದೇ ಕೆಲಸ ಆಗುತ್ತಿಲ್ಲ. ಜನತೆ ಒಂದು ಅವಕಾಶ ಕೊಟ್ಟರೆ ಈ ಎಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಅದಕ್ಕಾಗಿ ಕ್ಷೇತ್ರದ ಜನತೆಯಲ್ಲೂ ಹೊಸ ನಾಯಕರ ಆಗಮನದ ನಿರೀಕ್ಷೆಯಲ್ಲಿದ್ದಾರೆಂದು ಹೇಳಿದರು.
ತಾನು ಶಾಸಕನಾದರೆ, ಎಲ್ಲಾ ಇಲಾಖೆ ಕಚೇರಿ ಒಂದೇ ಸೂರಿನಡಿ 50 ಕೋಟಿ ಖರ್ಚು ಮಾಡಿ ಸುವರ್ಣಸೌಧ ನಿರ್ಮಿಸಲಾಗುವುದು. ವಾರಕ್ಕೆ ಕನಿಷ್ಟ 2 ದಿನ ಪ್ರತಿ ಗ್ರಾಮಗಳಿಗೆ ತಾಲೂಕಿನ ಎಲ್ಲಾ ಅಧಿಕಾರಿಗಳನ್ನು ಕರೆದೊಯ್ದು, ಜನರ ಸಮಸ್ಯೆ ಸ್ಥಳದಲ್ಲೇ ನಿವಾರಣೆ ಮಾಡುತ್ತೇನೆ. ಕೆಲಸ ಮಾಡದ ಅಧಿಕಾರಿಗಳಿಗೆ ಗೇಟ್ ಪಾಸ್ ಕೊಡುತ್ತೇನೆ. ಆರೋಗ್ಯದ ದೃಷ್ಟಿಯಿಂದ ಪಟ್ಟಣದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗುವುದು.
ಈ ಭಾಗದಲ್ಲಿ ಎಸ್ಸಿ, ಎಸ್ಟಿ, ಒಕ್ಕಲಿಗರು ಸೇರಿದಂತೆ ಎಲ್ಲಾ ಸರ್ವ ಸಮುದಾಯಕ್ಕೂ ಪ್ರತ್ಯೇಕ ಭವನ ನಿರ್ಮಿಸಲಾಗುವುದು. ಕಾಡಾನೆ ಸಮಸ್ಯೆಯಿಂದ ಮುಕ್ತಿ ಕಾಣಲು ತಾಲೂಕಿನಲ್ಲಿಯೇ ಆನೆ ಶಿಬಿರ ಸ್ಥಾಪಿಸಲಾಗುವುದು. ನಿವೇಶನ ಸಮಸ್ಯೆ ಬಗೆಹರಿಸಲಾಗುವುದು. ಜಾಗದ ಕೊರತೆಯಾದರೆ ತಾನೇ ಖರಿದಿ ಮಾಡಿ ಬಡವರಿಗೆ ನಿವೇಶನ ಹಂಚಿಕೆ ಮಾಡುತ್ತೇನೆ. ಉದ್ಯೋಗ ಸೃಷ್ಟಿಸಲು ಬೆಂಗಳೂರಿನ ಉದ್ಯಮಿಗಳೊಂದಿಗೆ ಚರ್ಚಿಸಿ ತಾಲೂಕಿನಲ್ಲಿಯೇ ಒಂದು ಕಾರ್ಖಾನೆ ಸ್ಥಾಪಿಸಲು ಶ್ರಮಿಸುತ್ತೇನೆ. ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು.
ಇಂತಹ ಅನೇಕ ಯೋಜನೆ ತಾನು ರೂಪಿಸಿ ಇಡೀ ದೇಶ ತಿರುಗಿ ನೋಡುವ ಹಾಗೆ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆಂದು ಹೇಳಿದರು.
ಗೋಷ್ಠಿಯಲ್ಲಿ ಕರುನಾಡು ರಕ್ಷಣಾ ವೇದಿಕೆ ಮುಖಂಡರಾದ ಸಂಜಯ್ಗೌಡ, ಪ್ರಸನ್ನ ಉಪಸ್ಥಿತರಿದ್ದರು.