ಕಾಡಾನೆ ದಾಳಿಯಿಂದ ಜನರ ಸಾವು ನಿಲ್ಲುವಂತೆ ಕಾಣುತ್ತಿಲ್ಲ. ಇಂದು ನಮ್ಮ ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಮತ್ತೊಂದು ಸಾವು ಸಂಭವಿಸಿದೆ.
ಜಿಲ್ಲೆಯ ತರೀಕೆರೆ ತಾಲ್ಲೂಕಿನ ಹಾದಿಕೆರೆ ಗ್ರಾಮದ ರೈತ ಈರಪ್ಪ(60 ವರ್ಷ) ಎಂಬುವವರನ್ನು ಕಾಡಾನೆ ತುಳಿದು ಸಾಯಿಸಿದೆ.
ತಮ್ಮ ಹೊಲದಲ್ಲಿ ಬೆಳೆದಿದ್ದ ರಾಗಿಯನ್ನು ಕಾಯಲು ರಾತ್ರಿ ಸಮಯ ಗುಡಿಸಲಿನಲ್ಲಿ ಮಲಗಿದ್ದಾಗ ಇಂದು ಮುಂಜಾನೆ ಏಕಾಏಕಿ ಕಾಡಾನೆ ದಾಳಿ ಮಾಡಿ ರೈತ ಈರಪ್ಪ ಅವರನ್ನು ಎಳೆದೊಯ್ದು ಪಕ್ಕದಲ್ಲಿ ಅಡಿಕೆ ಗಿಡಗಳನ್ನು ಬೆಳೆದಿದ್ದ ಹೊಲದಲ್ಲಿ ತುಳಿದು ಸಾಯಿಸಿದೆ.
ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಇದು ಕಾಡಾನೆಗೆ ನಾಲ್ಕನೇ ಬಲಿಯಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಈಗ್ಗೆ ಮೂರು ಜನ ಕಾಡಾನೆಗೆ ಬಲಿಯಾಗಿದ್ದರು.
ತೀವ್ರ ಪ್ರತಿಭಟನೆಯ ನಂತರ ಮೂಡಿಗೆರೆ ತಾಲ್ಲೂಕಿನಲ್ಲಿ ಮೂರು ಕಾಡಾನೆಗಳನ್ನು ಸೆರೆಹಿಡಿಯಲಾಗಿದೆ.
ತರೀಕೆರೆ ತಾಲ್ಲೂಕಿನಲ್ಲಿಯೂ ನಿರಂತರ ಕಾಡಾನೆ ದಾಳಿಗಳು ರೈತರ ಹೊಲಗದ್ದೆಗಳ ಮೇಲೆ ನಡೆಯುತ್ತಿದೆ.
ಇಂದು ಹಾದಿಕೆರೆ ಗ್ರಾಮದಲ್ಲಿ ಜನರು ತೀವ್ರ ಪ್ರತಿಭಟನೆ ನಡೆಸಿದ್ದು, ಕಾಡಾನೆಗಳನ್ನು ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.