ಕಾಡಾನೆಗಳ ಚಲನವಲನಗಳ ಬಗ್ಗೆ ಜನರಿಗೆ ಮಾಹಿತಿ ಮತ್ತು ಎಚ್ಚರಿಕೆ ನೀಡುವ ಸಲುವಾಗಿ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳು ಹೆಚ್ಚಾಗಿ ಓಡಾಡುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಡಿಜಿಟಲ್ ಡಿಸ್ಪ್ಲೇ ಬೋರ್ಡ್ ಹಾಗೂ ಎಸ್ಎಂಎಸ್ ಸೇವೆಗೆ ಚಾಲನೆ ನೀಡಿದೆ.
ನಿನ್ನೆ ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿ ಇಂತಹ ಡಿಜಿಟಲ್ ಬೋರ್ಡ್ ಒಂದನ್ನು ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿಯವರು ; ಸರಕಾರದ ಆದೇಶದಂತೆ ಅರಣ್ಯ ಇಲಾಖೆ ಹರಸಾಹಸಪಟ್ಟು ಊರುಬಗೆಯಲ್ಲಿ ಬೈರ ಆನೆ ಮತ್ತು ಕುಂದೂರು ಭಾಗದಲ್ಲಿ 2 ಕಾಡಾನೆ ಸೆರೆ ಹಿಡಿದು ಸಾಗಿಸಲಾಗಿದೆ. ಇದರಿಂದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಊರುಬಗೆಯಲ್ಲಿ ಸೆರೆಹಿಡಿದ ಆನೆ ಬೈರ ಆನೆ ಅಲ್ಲ ಎಂಬುದು ಕೆಲವರು ಅಭಿಪ್ರಾಯಿಸಿದ್ದಾರೆ. ಆದರೆ ಗೂನು ಬೆನ್ನು ಇದ್ದು, ಬಲಿ ತೆಗೆದುಕೊಳ್ಳುತ್ತಿದ್ದ ಬೈರ ಆನೆಯನ್ನೇ ಸೆರೆ ಹಿಡಿಯಲಾಗಿದೆ. ಜನರಲ್ಲಿ ಗೊಂದಲ ಬೇಡ. ಮುಂದಿನ ದಿನಗಳಲ್ಲಿ ಇತರೆ ಆನೆಗಳನ್ನು ಹಿಡಿಯಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ಈಗ ಡಿಜಿಟಲ್ ಡಿಸ್ಪ್ಲೇ ಬೋರ್ಡ್ ಅಳವಡಿಸಿದ್ದರಿಂದ ಜನರು ಎಚ್ಚರಿಕೆಯಿಂದ ಇರಲು ಸಾಧ್ಯವಾಗಿದೆ ಎಂದು ಹೇಳಿದರು.
ಡಿಸಿಎಫ್ ಕ್ರಾಂತಿ ಮಾತನಾಡಿ, ಕಾಡಾನೆ ಸಂಚರಿಸುವ ಬಗ್ಗೆ ಮಾಹಿತಿ ನೀಡಲು ಮೂಡಿಗೆರೆ ತಾಲ್ಲೂಕಿನ ಹ್ಯಾಂಡ್ಪೋಸ್ಟ್, ಬೈದುವಳ್ಳಿ, ಗೌಡಹಳ್ಳಿ, ಬೈರಾಪುರ, ಮೇಕನಗದ್ದೆ, ಗುತ್ತಿ, ಚೇಗು, ಗೋಣಿಬೀಡು, ಕುಂದೂರು, ಗಬ್ಗಲ್ ಒಟ್ಟು 10 ಕಡೆ ಕಾಡಾನೆ ಇರುವ ಮಾಹಿತಿ ಬಗ್ಗೆ ಡಿಜಿಟಲ್ ಡಿಸ್ಪ್ಲೇ ಬೋರ್ಡ್ ಅಳವಡಿಸಲಾಗಿದೆ. ಸಂಜೆ 4 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಚಾಲನೆಯಲ್ಲಿರುತ್ತದೆ. ಕಾಡಾನೆಗಳು ಕಂಡು ಬಂದರೆ 7204004261 ಸಂಖ್ಯೆಗೆ ಕರೆ ಮಾಡಿದರೆ ಕೂಡಲೇ ಆನೆ ಟಾಸ್ಕ್ ಪೋರ್ಸ್ (ಇಟಿಎಫ್) ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾಡಾನೆ ಓಡಿಸುವ ಕ್ರಮ ಕೈಗೊಳ್ಳುತ್ತಾರೆಂದು ಮಾಹಿತಿ ನೀಡಿದರು.
ಮೂಡಿಗೆರೆ ಎಸಿಎಫ್ ಡಾ. ರಾಜೇಶ್ ನಾಯ್ಕ್, ಆರ್ಎಫ್ಓ ಮೋಹನ್ಕುಮಾರ್, ಇಟಿಎಫ್ನ ಆರ್ಎಫ್ಒ ಸಿ.ರಂಗನಾಥ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.