ನಾಡಕಛೇರಿಯ ಎದುರಿಗೆ ಶವವಿಟ್ಟು ಜನ ಪ್ರತಿಭಟಿಸುವುದನ್ನು ಕಂಡು ರಸ್ತೆಯಲ್ಲಿ ಹೋಗುತ್ತಿದ್ದ ಜನರು ಕುತೂಹಲದಿಂದ ಸುತ್ತನೆರೆದರು. ಕಛೇರಿಯೊಳಗೆ ಕಾರ್ಯಮಗ್ನರಾಗಿದ್ದ ನೌಕರರು ತಬ್ಬಿಬ್ಬು ಗೊಂಡರು.
ಕೊಪ್ಪ ತಾಲ್ಲೂಕಿನ ಜಯಪುರ ನಾಡಕಛೇರಿ ವ್ಯಾಪ್ತಿಯಲ್ಲಿ ಬರುವ ಹೆರೂರು ಹುತ್ತಿನಮಕ್ಕಿ ಗ್ರಾಮದಲ್ಲಿ ಸ್ಮಶಾನ ಮಂಜೂರಾತಿಗೆ ಆಗ್ರಹಿಸಿ ನಾಡ ಕಛೇರಿ ಎದುರು ಗ್ರಾಮಸ್ಥರು ಶವವನ್ನಿಟ್ಟು ಪ್ರತಿಭಟನೆ ನಡೆಸಿದಾಗ ಕಂಡುಬಂದ ದೃಶ್ಯಗಳಿವು.
ಹುತ್ತಿನಮಕ್ಕಿ ಗ್ರಾಮದಲ್ಲಿ ಸುಮಾರು 60 ಕುಟುಂಬಗಳು ವಾಸಿಸುತ್ತಿವೆ. ಆದರೆ ಊರಿನಲ್ಲಿ ಶವಸಂಸ್ಕಾರ ಮಾಢಲು ಜಾಗ ಇಲ್ಲವಾಗಿದ್ದು, ಕಂದಾಯ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಇಲ್ಲಿಗೆ ಸ್ಮಶಾನ ಭೂಮಿ ಮಂಜೂರಾಗಿಲ್ಲ.
ಸ್ಮಶಾನದ ಬೇಡಿಕೆ ಮುಂದಿಟ್ಟುಕೊಂಡು ಕಳೆದ ವರ್ಷ ನಡೆದಿದ್ದ ಗ್ರಾಮಪಂಚಾಯಿತಿ ಚುನಾವಣೆಯನ್ನು ಸಹ ಬಹಿಷ್ಕಾರ ಮಾಡಲು ಮುಂದಾಗಿದ್ದರು. ಆಗ ತಾಲ್ಲೂಕು ಆಡಳಿತ ಸ್ಮಶಾನ ಜಾಗ ಮಂಜೂರು ಮಾಡಿಕೊಡುವ ಭರವಸೆ ನೀಡಿತ್ತು.
ಗ್ರಾಮದ ಸರ್ವೇ ನಂಬರ್ 166ರಲ್ಲಿ 40 ಎಕರೆಯಷ್ಟು ಕಂದಾಯ ಭೂಮಿ ಇದೆ. ಆದರೆ ಅದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾಮಸ್ಥರಿಗೆ ಕನಿಷ್ಠ 3 ಎಕರೆ ಸ್ಮಶಾನಕ್ಕಾಗಿ ಮಂಜೂರು ಮಾಡಿ ಎಂದು ಬೇಡಿಕೆ ಇಟ್ಟರು ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜನರ ಮನವಿಗೆ ಸ್ಪಂದಿಸದ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ಗ್ರಾಮದಲ್ಲಿ ನಿನ್ನೆ ಮೃತಪಟ್ಟ ಮಂಜುನಾಥ್ ( 62) ಎನ್ನುವರ ಶವವನ್ನು ಗ್ರಾಮಸ್ಥರು ಜಯಪುರ ನಾಡ ಕಛೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಎನ್ .ಆರ್ .ಪುರ ತಹಸಿಲ್ದಾರ್ ರಮೇಶ್ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ಸು ಪಡೆದು ಒತ್ತುವರಿ ಮಾಡಿರುವ ಅದೇ ಜಾಗದಲ್ಲಿ ಅಂತ್ಯಸಂಸ್ಕಾರ ವನ್ನು ನೆರವೇರಿಸಿದರು.
ದರ್ಪಣ ವಾಟ್ಸಾಪ್ ಗ್ರೂಪಿಗೆ ನೀವು ಇನ್ನೂ ಸೇರಿಲ್ಲದಿದ್ದರೆ ಈ ಕೆಳಗಿನ ಲಿಂಕ್ ಮೂಲಕ ವಾಟ್ಸಾಪ್ ಗ್ರೂಪ್ ಸೇರಬಹುದು
chat.whatsapp.com/FpG39nVthT95vnuM0C6nMLM0C6nML