ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ವ್ಯಾಪಕವಾಗಿ ಕಂಡುಬರುತ್ತಿದೆ. ಸರ್ಕಾರ ಚರ್ಮಗಂಟು ರೋಗ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರ್ವಜನಿಕರು ಈ ರೋಗವನ್ನು ನಿರ್ಲಕ್ಷ್ಯ ಮಾಡುತ್ತಿರುವಂತೆ ಕಾಣುತ್ತಿದ್ದು, ನಿರ್ಲಕ್ಷ್ಯ ಮಾಡಿದರೆ ಜಾನುವಾರಗಳ ಜೀವಕ್ಕೆ ಕುತ್ತಾಗುವ ಸಾಧ್ಯತೆ ಇದೆ.
ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಬಹುತೇಕ ಕಡೆ ಚರ್ಮಗಂಟು ರೋಗ ಜಾನುವಾರುಗಳಲ್ಲಿ ಕಂಡುಬಂದಿದೆ.
ರೋಗಪೀಡಿತ ಜಾನುವಾರುಗಳಿಗೆ ಆರಂಭದಲ್ಲಿ ಮೈಯಲ್ಲಿ ಗಂಟು ರೂಪದಲ್ಲಿ ಕಾಣಿಸಿಕೊಂಡು ನಂತರ ಕೆಲ ದಿನಗಳಲ್ಲಿ ಮೈ ತುಂಬಾ ಆವರಿಸಿಕೊಳ್ಳುತ್ತವೆ. ಕ್ರಮೇಣ ಗಂಟುಗಳು ಕೀವುಗಟ್ಟುತ್ತದೆ. ಕಣ್ಣು ಮೂಗಿನಿಂದ ನೀರು ಸೋರುವುದು, ಜ್ವರ ಕಾಣಿಸಿಕೊಳ್ಳುವುದು, ಗೋವುಗಳು ಮೇವು ತಿನ್ನುವುದನ್ನು ಕಡಿಮೆ ಮಾಡುತ್ತವೆ, ಹಾಲು ನೀಡುವ ಪ್ರಮಾಣವು ಕಡಿಮೆಯಾಗುತ್ತದೆ, ಕ್ರಮೇಣ ಬಾಯಲ್ಲಿ ಹುಣ್ಣುಗಳಾಗಿ ರೋಗ ಉಲ್ಬಣಗೊಂಡು ಜಾನುವಾರುಗಳು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ ಮೂಡಿಗೆರೆ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮನು ಅವರು ;
ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಈ ರೋಗ ಹರಡುತ್ತದೆ. ಇಂದು ಒಂದು ಸಾಂಕ್ರಾಮಿಕ ರೋಗ. ಸೊಳ್ಳೆ, ಉಣುಗು, ಕಾಡುನೊಣಗಳ ಮೂಲಕ ಇದು ಜಾನುವಾರಿನಿಂದ ಜಾನುವಾರಿಗೆ ಹರಡುತ್ತದೆ. ಹಾಗಾಗಿ ರೋಗ ಕಂಡು ಬಂದ ಜಾನುವಾರುಗಳನ್ನು ಆರೋಗ್ಯವಂತ ಜಾನುವಾರುಗಳಿಂದ ಬೇರ್ಪಡಿಸಬೇಕು.
ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮನೆಯಲ್ಲೇ ಮದ್ದು ತಯಾರಿಸಬಹುದು. ವೀಳ್ಯದೆಲೆ, ಕಾಣುಮೆಣಸು, ಉಪ್ಪು, ಬೆಲ್ಲವನ್ನು ಸೇರಿಸಿ ರುಬ್ಬಿ ಉಂಡೆ ಮಾಡಿ ದಿನಕ್ಕೆ ಎರಡು ಬಾರಿಯಂತೆ ಒಂದು ವಾರದ ಕಾಲ ಜಾನುವಾರುಗಳಿಗೆ ತಿನ್ನಿಸಬೇಕು. ಇದರಿಂದ ರೋಗ ಬಾರದಂತೆ ತಡೆಯಲು ಸಹಾಯಕವಾಗುತ್ತದೆ.
ಪಶುವೈದ್ಯ ಇಲಾಖೆಯಿಂದ ಜಾನುವಾರುಗಳಿಗೆ ರೋಗನಿರೋಧಕ ಶಕ್ತಿ ವೃದ್ದಿಸುವ ಲಸಿಕೆ ಹಾಕುತ್ತಿದ್ದು, ಜಾನುವಾರು ಸಾಕಾಣೆ ಮಾಡಿರುವವರು ತಮ್ಮ ಸಮೀಪದ ಪಶುವೈದ್ಯಕೀಯ ಕಛೇರಿಯನ್ನು ಸಂಪರ್ಕಿಸಿ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು. ನಾಲ್ಕು ತಿಂಗಳ ಮೇಲ್ಪಟ್ಟ ಕರುವಿನಿಂದ ಎಲ್ಲಾ ವಯಸ್ಕ ಜಾನುವಾರುಗಳಿಗೂ ಲಸಿಕೆ ಹಾಕಿಸಬಹುದು.
ಲಸಿಕೆ ಹಾಕಿಸುವುದರಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ.
ಮುಂಜಾಗ್ರತ ಕ್ರಮಗಳ ಮೂಲಕ ತಮ್ಮ ಜಾನುವಾರುಗಳನ್ನು ಈ ರೋಗದಿಂದ ರಕ್ಷಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ವರದಿ : ಸಂದೀಪ್ ಪಟೇಲ್, ಗೋಣಿಬೀಡು