ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಮಹಾವಿದ್ಯಾಲಯ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ತಾಲ್ಲೂಕು ಬೆಳೆಗಾರರ ಸಂಘ, ಕೃಷಿಕ ಸಮಾಜ ಇನ್ನೂ ಮುಂತಾದ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇದೇ ಡಿಸೆಂಬರ್ 23ರಂದು ಶುಕ್ರವಾರ “ಕೃಷಿ ಮತ್ತು ತೋಟಗಾರಿಕಾ ಮೇಳ” ವನ್ನು ಆಯೋಜಿಸಲಾಗಿದೆ.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕಾ ಮೇಳಕ್ಕೆ ಕೃಷಿಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ನಾರಾಯಣ್ ಎಸ್. ಮಾವರ್ಕರ್ ಕೋರಿದ್ದಾರೆ.
ಮೂಡಿಗೆರೆ ಪತ್ರಿಕಾ ಕಛೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾಹಿತಿ ನೀಡಿದ ಅವರು ಮೇಳದಲ್ಲಿ ಕೃಷಿ-ತೋಟಗಾರಿಕೆ ನೂತನ ತಂತ್ರಜ್ಞಾನಗಳು, ವೈಜ್ಞಾನಿಕ ಮೀನು ಕೃಷಿ, ಎರೆಹುಳು ಗೊಬ್ಬರ ತಯಾರಿಕೆ, ಬಹುಬೆಳೆ ಕೃಷಿ ಪದ್ಧತಿ, ಸಮಗ್ರ ಕೃಷಿ ಪದ್ದತಿಗಳು, ವಿವಿಧ ಕೃಷಿ ಸಂಬಂಧಿತ ಇಲಾಖೆಗಳಿಂದ ಮತ್ತು ಕೃಷಿ ಪರಿಕರ ಸಂಸ್ಥೆಗಳಿಂದ ಬೀಜ, ಗೊಬ್ಬರ, ಸಸ್ಯ ಸಂರಕ್ಷಣೆ, ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ರೈತಾಪಿ ವರ್ಗದವರು ಈ ಮೇಳದಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಂ. ಶಿವಪ್ರಸಾದ್ ಮಾತನಾಡಿ ಮೇಳದಲ್ಲಿ ಗೋಡಂಬಿ ಮತ್ತು ತೋಟದ ಬೆಳೆಗಳ ಉತ್ಪಾದನ ತಾಂತ್ರಿಕತೆ ಕುರಿತು ಡಾ. ಜೆ. ವೆಂಕಟೇಶ್, ನೈಸರ್ಗಿಕ ಕೃಷಿಯ ಕುರಿತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ್ ನಾರಾಯಣಪುರ, ಸುಸ್ಥಿರ ಜೀವನೋಪಾಯಕ್ಕೆ ಕೃಷಿ ನವೋದ್ಯಮ ಕುರಿತು ಕೃಷಿಕ ಪತ್ರಿಕೆ ಪ್ರಕಾಶಕ ದಿನೇಶ್ ದೇವರುಂದ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆವಿಕೆ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಎ.ಟಿ, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಕೆ. ನಾಗೇಶ್, ಹಿರಿಯ ಕ್ಷೇತ್ರ ಅಧೀಕ್ಷಕ ಗಣಪತಿ, ರೈತಮುಖಂಡ ಪ್ರಸನ್ನ ಮರಗುಂದ ಉಪಸ್ಥಿತರಿದ್ದರು.