ಮುಂಬರುವ ವಿಧಾನಸಭಾ ಚುನಾವಣೆಗೆ ಜೆ.ಡಿ.ಎಸ್. ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ರಾಜ್ಯದ 93 ಕ್ಷೇತ್ರಗಳಿಗೆ ತನ್ನ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹೀಂ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನಲ್ಲಿಂದು ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಇಂದು ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ತಿಮ್ಮಶೆಟ್ಟಿ, ಮೂಡಿಗೆರೆಯಿಂದ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮತ್ತು ಶೃಂಗೇರಿ ಕ್ಷೇತ್ರದಿಂದ ಡಾ. ಸುಧಾಕರ ಶೆಟ್ಟಿ ಇವರ ಹೆಸರನ್ನು ಘೋಷಣೆ ಮಾಡಲಾಗಿದೆ.
ಮೂಡಿಗೆರೆಯಲ್ಲಿ ಈ ಹಿಂದೆ ಮೂರು ಬಾರಿ ಶಾಸಕರಾಗಿದ್ದ ಮತ್ತು ಒಮ್ಮೆ ಸಚಿವರು ಆಗಿದ್ದ ಬಿ.ಬಿ. ನಿಂಗಯ್ಯನವರ ಹೆಸರನ್ನು ಅಂತಿಮಗೊಳಿಸಲಾಗಿದೆ. ನಿಂಗಯ್ಯನವರಿಗೆ ಟಿಕೆಟ್ ನೀಡಬಾರದು ಎಂದು ಕ್ಷೇತ್ರದಲ್ಲಿ ಪಕ್ಷದ ಒಂದು ಬಣ ವಿರೋಧ ವ್ಯಕ್ತಪಡಿಸಿತ್ತು. ಆದರೆ ವಿರೋಧವನ್ನು ಲೆಕ್ಕಿಸದೆ ನಿಂಗಯ್ಯನವರ ಮೇಲೆ ಪಕ್ಷ ವಿಶ್ವಾಸವಿಟ್ಟು ಹೆಸರು ಘೋಷಣೆ ಮಾಡಿದೆ.
ಚಿಕ್ಕಮಗಳೂರಿನಿಂದ ಪಕ್ಷದ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮತ್ತು ತಿಮ್ಮ ಶೆಟ್ಟಿಯವರ ಹೆಸರು ಕೇಳಿಬರುತ್ತಿತ್ತು. ಅಂತಿಮವಾಗಿ ತಿಮ್ಮಶೆಟ್ಟಿಯವರ ಹೆಸರನ್ನು ಘೋಷಣೆ ಮಾಡಲಾಗಿದೆ. ತಿಮ್ಮಶೆಟ್ಟಿ ಕಳೆದೊಂದು ವರ್ಷದಿಂದ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಶೃಂಗೇರಿಯಿಂದ ಸುಧಾಕರ್ ಎಸ್. ಶೆಟ್ಟಿಯವರ ಹೆಸರನ್ನು ಅಂತಿಗೊಳಿಸಲಾಗಿದೆ. ಮೂಲತಃ ಕೊಪ್ಪ ಮೂಲದವರಾದ ಸುಧಾಕರ್ ಶೆಟ್ಟಿ ಮೈಸೂರಿನಲ್ಲಿ ನೆಲೆಸಿದ್ದು ಕಳೆದ ಒಂದು ವರ್ಷದಿಂದ ಶೃಂಗೇರಿ ಕ್ಷೇತ್ರದಲ್ಲಿ ಜೆ.ಡಿ.ಎಸ್. ಟಿಕೆಟ್ ಆಕಾಂಕ್ಷಿಯಾಗಿ ಕೆಲಸ ಮಾಡುತ್ತಿದ್ದಾರೆ.
ನಮ್ಮ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ತರೀಕೆರೆ ಮತ್ತು ಕಡೂರು ಕ್ಷೇತ್ರಗಳಿಗೆ ಹೆಸರು ಘೋಷಣೆ ಮಾಡಿಲ್ಲ.
ರಾಮನಗರದಿಂದ ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಹೆಸರು ಘೋಷಣೆ ಮಾಡಲಾಗಿದೆ.
ಜೆ.ಡಿ.ಎಸ್. ಪ್ರಬಲವಾಗಿರುವ ನೆರೆಯ ಹಾಸನ ಜಿಲ್ಲೆಯ ಯಾವ ಕ್ಷೇತ್ರಗಳಿಗೂ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಜೆ.ಡಿ.ಎಸ್. ಮೊದಲನೆಯದಾಗಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಜೆ.ಡಿ.ಎಸ್. ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡುವ ಮೂಲಕ 2023ರ ಏಪ್ರಿಲ್-ಮೇ ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಚರ್ಚೆಗೆ ಅಧಿಕೃತವಾಗಿ ಚಾಲನೆ ನೀಡಿದೆ.
ಈ ಪಟ್ಟಿಯಲ್ಲಿನ ಕೆಲವು ಹೆಸರುಗಳು ಚುನಾವಣೆ ಸಮಯದಲ್ಲಿ ನಡೆಯುವ ದಿಢೀರ್ ರಾಜಕೀಯ ಬೆಳವಣಿಗೆಗಳಿಂದ ಬದಲಾಗುವ ಸಾಧ್ಯತೆಗಳು ಇವೆ.