ಚಿಕ್ಕಮಗಳೂರಿನ ದತ್ತಪೀಠಕ್ಕೆ ಸಾಗುವ ರಸ್ತೆಯಲ್ಲಿ ವಾಹನಗಳನ್ನು ಪಂಚರ್ ಮಾಡುವ ಉದ್ದೇಶದಿಂದ ಚೂಪಾದ ಮೊಳೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಚಿಕ್ಕಮಗಳೂರು ಗೌರಿಕಾಲುವೆಯ ನಿವಾಸಿ ಅಜಂ ಪಾಷಾ ಶರಣಾದ ಆರೋಪಿ.
ಡಿಸೆಂಬರ್ 6ರಿಂದ 8 ರವರೆಗೆ ನಡೆದ ದತ್ತಜಯಂತಿ ಸಂದರ್ಭದಲ್ಲಿ ದತ್ತಪೀಠಕ್ಕೆ ಭಕ್ತರು ಸಾಗುವ ದಾರಿಯಲ್ಲಿ ಸುಮಾರು ದೂರ ಚೂಪಾದ ಮೊಳೆಗಳನ್ನು ಚೆಲ್ಲಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊನ್ನೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಚಿಕ್ಕಮಗಳೂರು ಅಯ್ಯಪ್ಪ ನಗರದ ಮಹಮದ್ ಶಹಬಾದ್ ಮತ್ತು ವಾಹೀದ್ ಹುಸೇನ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣದಲ್ಲಿ ಹಲವರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇದೀಗ ಪೊಲೀಸರ ಬಂಧನದ ಬೀತಿಯಿಂದ ಅಜಂ ಪಾಷಾ ಎಂಬಾತ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಇದರೊಂದಿಗೆ ಗಿಡಿಗೇಡಿ ಕೃತ್ಯ ನಡೆಸಿದ್ದ ಮೂವರ ಬಂಧನವಾಗಿದೆ.
ಈ ನಡುವೆ ಶಾಸಕ ಸಿ.ಟಿ.ರವಿಯವರು ಈ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿ ಇದರ ಹಿಂದೆ ದೇಶದ್ರೋಹಿ ಸಂಘಟನೆಗಳ ಕೈವಾಡ ಇರುವ ಅನುಮಾನವಿದೆ. ಹಿಂದೂ ಮತ್ತು ಮುಸ್ಲೀಮರ ನಡುವೆ ಶಾಂತಿಕದಡುವ ಉದ್ದೇಶದಿಂದ ಇಂತಹ ಕುಕೃತ್ಯಗಳನ್ನು ನಡೆಸುತ್ತಿದ್ದು, ಘಟನೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.