ಸರ್ಕಾರಿ ಜಮೀನು ಅಕ್ರಮವಾಗಿ ಮಂಜೂರಾತಿ ಮಾಡಲು ಅನುಮೋದನೆ ನೀಡಿ ಸರ್ಕಾರಕ್ಕೆ ವಂಚಿಸಿದ ಗೋಣಿಬೀಡು ಹೋಬಳಿ ಕಂದಾಯ ನಿರೀಕ್ಷಕರ ವಿರುದ್ಧ ತಹಸಿಲ್ದಾರ್ ನಾಗರಾಜ್ ಅವರು ನೀಡಿದ ದೂರಿನಂತೆ ಕಂದಾಯ ನಿರೀಕ್ಷಕ ಲಕ್ಷ್ಮಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಗೋಣೀಬೀಡು ಸಮೀಪದ ಹೊಸಪುರ ಗ್ರಾಮದ ಸ.ನಂ. 73ರಲ್ಲಿ ಗ್ರಾಮದ ನಿವಾಸಿ ಅಭಿಷೇಕ್ ಎಂಬುವರಿಗೆ 25 ಗುಂಟೆ ಸರ್ಕಾರಿ ಜಮೀನು ಮಂಜೂರಾತಿಗೆ ಅದೇ ಗ್ರಾಮದ ನಿವಾಸಿ ನೀಲಯ್ಯ ಪೂಜಾರಿ ಎಂಬವರ ಸಾಗುವಳಿ ಚೀಟಿ ಸಂಖ್ಯೆ 666/12.13ಯನ್ನು ಅಕ್ರಮವಾಗಿ ಬಳಸಿಕೊಂಡು ಫಲಾನುಭವಿಯಿಂದ ಅಕ್ರಮ ಸಕ್ರಮ ನಿಯಮಾವಳಿಯ ಅರ್ಜಿ ಪಡೆಯದೆ ಬಗರ್ ಹುಕುಂ ಸಮಿತಿ ಮುಂದೆ ಮಂಡಿಸದೆ ಕಂದಾಯ ಇಲಾಖೆಯ ಭೂಮಿ ಶಾಖೆಯಲ್ಲಿ ಊ.14/2020.21 ಎಂ ಆರ್ ಸಂಖ್ಯೆಯನ್ನು ಅಕ್ರಮವಾಗಿ ನಮೂದಿಸಿ ಖಾತೆ ಮಾಡಲು ಅನುಮೋದಿಸಿ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಕಂದಾಯ ನಿರೀಕ್ಷಕ ಲಕ್ಷ್ಮಣ್ ಅವರ ವಿರುದ್ಧ ತಹಸಿಲ್ದಾರ್ ನಾಗರಾಜ್ ಮೂಡಿಗೆರೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಂಗಳವಾರ ಸಂಜೆ ಲಕ್ಷ್ಮಣ್ ಅವರನ್ನು ಮೂಡಿಗೆರೆ ಪಟ್ಟಣದ ಅವರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಂಧಿಸಿದ್ದಾರೆ.
ಕರ್ತವ್ಯ ನಿರ್ವಹಣೆಯ ಬಗ್ಗೆ ಹಲವು ದೂರು ಬಂದ ಹಿನ್ನೆಲೆಯಲ್ಲಿ ಕಳೆದ 6 ತಿಂಗಳ ಹಿಂದೆ ಲಕ್ಷ್ಮಣ್ ಅವರನ್ನು ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿದರು. ಅಮಾನತ್ತಿನ ಬಳಿಕ ಹಿಂಬಡ್ತಿ ನೀಡಿ ಕೊಪ್ಪ ತಾಲ್ಲೂಕಿಗೆ ವರ್ಗಾವಣೆಗೊಳಿಸಲಾಗಿತ್ತು. ಆ ಆದೇಶಕ್ಕೆ ಕೆಎಟಿಯಿಂದ ತಡೆ ಆದೇಶ ತಂದು ಮತ್ತೆ ಗೋಣಿಬೀಡು ಕಂದಾಯ ನಿರೀಕ್ಷಕ ಹುದ್ದೆಗೆ ಮರಳಿದ್ದರು. ಲಕ್ಷ್ಮಣ್ ಅವರು ಅಮಾನತ್ತಿನಲ್ಲಿದ್ದಾಗ ಬಣಕಲ್ ಕಂದಾಯ ನಿರೀಕ್ಷಕ ಮಂಜುನಾಥ್ ಅವರನ್ನು ಗೋಣಿಬೀಡಿಗೆ ನಿಯೋಜನೆ ಮೇರೆಗೆ ಕಳಿಸಲಾಗಿತ್ತು. ಲಕ್ಷ್ಮಣ್ ಅವರು ಮತ್ತೆ ಅದೇ ಜಾಗಕ್ಕೆ ಬಂದಾಗ ಇಬ್ಬರು ಕಂದಾಯ ನಿರೀಕ್ಷಕರು ಒಂದೇ ಕಚೇರಿಯಲ್ಲಿ ಕುಳಿತು ಒಂದು ತಿಂಗಳು ಕರ್ತವ್ಯ ನಿರ್ವಹಿಸಿದ್ದರು. ಆಗ ಲಕ್ಷ್ಮಣ್ ಅವರನ್ನು ಮೂಡಿಗೆರೆ ತಾಲೂಕು ಕಚೇರಿಗೆ ವರ್ಗಾವಣೆಗೊಳಿಸಲಾಗಿತ್ತು. ನ್ಯಾಯಾಲಯದಲ್ಲಿ ತೀರ್ಮಾನವಾದ ಬಳಿಕ ಗೋಣಿಬೀಡು ಕಂದಾಯ ನಿರೀಕ್ಷಕರಾಗಿ ಈಗ 15 ದಿನದ ಹಿಂದೆ ಮತ್ತೆ ವಾಪಸಾಗಿದ್ದರು.
ಮೂಡಿಗೆರೆ ತಾಲ್ಲೂಕಿನಲ್ಲಿ ಕಂದಾಯ ಕೆಲವು ಅಧಿಕಾರಿಗಳು ಹಣದ ಆಸೆಯಿಂದ ಅನೇಕ ಅಕ್ರಮ ಭೂಮಂಜೂರು ಮಾಡಿದ್ದು, ಅಕ್ರಮ ಸಕ್ರಮ ಸಮಿತಿಯ ಎದುರು ಕಡತವನ್ನು ಮಂಡಿಸದೇ ನೇರವಾಗಿ ಪಹಣಿ ಮಾಡಿಕೊಟ್ಟಿರುತ್ತಾರೆ. ಈ ರೀತಿ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗೋಣಿಬೀಡು ಸಮೀಪದ ಹೊಸಪುರ ಗ್ರಾಮದಲ್ಲಿ ಹಿರಿಯ ಅಧಿಕಾರಿಗಳ ಕಣ್ತಪ್ಪಿಸಿ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಸರ್ಕಾರಿ ಜಮೀನು ಮಂಜೂರು ಮಾಡಲು ಕಂದಾಯ ನಿರೀಕ್ಷಕ ಲಕ್ಷ್ಮಣ್ ಅವರು ಅನುಮೋದನೆ ನೀಡಿ ಸರ್ಕಾರಕ್ಕೆ ವಂಚಿಸಿದ್ದಾರೆ. ಅವರ ವಿರುದ್ಧ ಜಿಲ್ಲಾಧಿಕಾರಿಗಳ ಆದೇಶದಂತೆ ನಾನು ಪೊಲೀಸರಿಗೆ ದೂರು ನೀಡಿರುತ್ತೇನೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಪೊಲೀಸರು ಅವರನ್ನು ಬಂಧಿಸಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು.
* ನಾಗರಾಜ್ ಮೂಡಿಗೆರೆ ತಹಸಿಲ್ದಾರ್.