ಅಪಘಾತಕ್ಕೀಡಾಗಿ ಮೃತಪಟ್ಟು ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲಿ ಧನ್ಯತೆ ಕಂಡ ಧನ್ಯಕುಮಾರ್ ಅವರ ಅಂತಿಮದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು.
ನಿನ್ನೆ ರಾತ್ರಿ ಮಂಗಳೂರಿನಿಂದ ಅವರ ಪಾರ್ಥೀವ ಶರೀರವನ್ನು ಅಂಬುಲೆನ್ಸ್ ಮೂಲಕ ಹುಟ್ಟೂರು ಬಣಕಲ್ ಸಮೀಪದ ಹೊರಟ್ಟಿ ಗ್ರಾಮಕ್ಕೆ ತರಲಾಯಿತು. ಕೊಟ್ಟಿಗೆಹಾರದಿಂದ ಆರಂಭವಾಗಿ ದಾರಿಯುದ್ದಕ್ಕೂ ಅವರ ಪಾರ್ಥಿವ ಶರೀರಕ್ಕೆ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದರು. ಅವರ ಹುಟ್ಟೂರಿನಲ್ಲಿ ಶೋಕದ ಕಟ್ಟೆಯೊಡೆದು ಜನರು ಕಣ್ಣೀರಾದರು. ಅವರ ಅಂತಿಮ ದರ್ಶನಕ್ಕೆ ಸಾವಿರಾರು ಮಂದಿ ಸೇರಿದ್ದರು.
ಅವರ ಮೃತದೇಹ ಸೋಮವಾರ ರಾತ್ರಿ ಕೊಟ್ಟಿಗೆಹಾರಕ್ಕೆ ಆಗಮಿಸುತ್ತಿದ್ದಂತೆ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಕೆಲ ಸಮಯ ಮುಚ್ಚಿ ಶ್ರದ್ದಾಂಜಲಿ ಸಲ್ಲಿಸಿದರು ವರ್ತಕರು, ಸಾರ್ವಜನಿಕರು ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಿದರು. ನೂರಾರು ಸಾರ್ವಜನಿಕರು ರಸ್ತೆಯ ಇಬ್ಬದಿಯಲ್ಲಿ ನೆರೆದು ಧನ್ಯಕುಮಾರ್ ಅವರಿಗೆ ಅಮರವಾಗಲಿ ಎಂದು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ವರ್ತಕರು, ವಿವಿಧ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಹಾಜರಿದ್ದರು.
ಮೂಡಿಗೆರೆ ತಾಲ್ಲೂಕು ಹೊರಟ್ಟಿ ಗ್ರಾಮದ ಹೆಚ್.ಬಿ. ಮಂಜುನಾಥ್ಗೌಡ ಮತ್ತು ಶೈಲಾ.ಎನ್.ಅರ್. ದಂಪತಿಗಳ ಮಗನಾದ ಧನ್ಯಕುಮಾರ್ ಹೆಚ್.ಎಂ ಸಬ್ಬೇನಹಳ್ಳಿ ಸಮೀಪ ಬೈಕ್ ನಲ್ಲಿ ಹೋಗುವಾಗ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ಮೃತ ಪಟ್ಟಿದ್ದು ಅವರ ಅಂಗಗಳನ್ನು ದಾನ ಮಾಡಲು ಅವರ ತಂದೆ, ತಾಯಿ ಕುಟುಂಬದ ಸದಸ್ಯರು ಒಪ್ಪಿಗೆ ನೀಡಿದ್ದು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಗನ ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಅಂಗಾಂಗಳಿಂದ ಆರು ಮಂದಿಯ ಜೀವಕ್ಕೆ ಆಸರೆಯಾಗಿದೆ.
ಧನ್ಯಕುಮಾರ್ ಪತ್ನಿ, ನಾಲ್ಕು ವರ್ಷದ ಮಗಳು, ತಂದೆ, ತಾಯಿ, ಆಪಾರ ಬಂಧು ಬಳಗವನ್ನು ಅಗಲಿದ್ದಾರೆ.