ಮೂಡಿಗೆರೆ ತಾಲೂಕಿನ ಊರುಬಗೆ ಹೊಸಳ್ಳಿ ಗ್ರಾಮದಲ್ಲಿ ಮೂಡಿಗೆರೆ ಭೈರ ಆನೆ ಸೆರೆಯಾಗಿದೆ.
ಇಂದು ಸಂಜೆ 4 ಗಂಟೆಯ ಹೊತ್ತಿಗೆ ಆನೆಗೆ ಅರವಳಿಕೆ ಚುಚ್ಚುಮದ್ದು ಹಾಕಿದ್ದು ಅದೇ ಸ್ಥಳದಲ್ಲಿ ಸುತ್ತಾಡಿ ರಸ್ತೆಯ ಸಮೀಪದಲ್ಲೇ ಆನೆ ಬಿದ್ದಿದೆ.
ಕುಂದೂರು ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸಾಕಾನೆ ತಂಡ ಇಲ್ಲಿಗೆ ಕರೆತಂದು ಭೈರನನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.
ಭೈರ ಆನೆ ಇತ್ತೀಚೆಗೆ ಊರುಬಗೆಯಲ್ಲಿ ಅರ್ಜುನ್ ಎಂಬುವವರನ್ನು ತುಳಿದು ಸಾಯಿಸಿತ್ತು.
ಈಗ್ಗೆ ಒಂದು ತಿಂಗಳ ಹಿಂದೆ ಈ ಆನೆಯನ್ನು ಹಿಡಿಯಲು ಸಾಕಾನೆಗಳ ತಂಡ ಬಂದಿದ್ದಾಗ ಭೈರ ನಾಪತ್ತೆಯಾಗಿತ್ತು.
ಇಂದು ಬೆಳಿಗ್ಗೆ ಯು.ಹೊಸಳ್ಳಿ ಸಮೀಪ ಭೈರ ಕಾಣಿಸಿಕೊಂಡ ನಂತರ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿ ಸೆರೆಹಿಡಿಯಲಾಗಿದೆ.
ಈ ಭಾಗದಲ್ಲಿ ಹೆಚ್ಚು ಉಪದ್ರವ ನೀಡುತ್ತಿದ್ದ ಈ ಆನೆಯನ್ನು ಸೆರೆಹಿಡಿದಿರುವುದಕ್ಕೆ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆನೆಯನ್ನು ಸೆರೆಹಿಡಿದ ಅರಣ್ಯ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ.