ಮೂಡಿಗೆರೆ ತಾಲ್ಲೂಕು ಊರುಬಗೆ ಸುತ್ತಮುತ್ತ ಉಪಟಳ ನೀಡುತ್ತಿರುವ ಮತ್ತು ಜೀವಹಾನಿಗೂ ಕಾರಣವಾಗಿರುವ ಬೈರ ಆನೆ ಮತ್ತೆ ಪ್ರತ್ಯಕ್ಷವಾಗಿದೆ. ಇತ್ತೀಚೆಗೆ ಈ ಆನೆಯನ್ನು ಹಿಡಿಯಲು ಸಾಕಾನೆಗಳ ಸಹಿತ ಕಾರ್ಯಾಚರಣೆ ತಂಡ ಆಗಮಿಸಿದ್ದಾಗ ಇದ್ದಕ್ಕಿದಂತೆ ನಾಪತ್ತೆಯಾಗಿದ್ದ ಬೈರ ಈಗ ಊರುಬಗೆ ಹೊಸಳ್ಳಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದೆ.
ಇವತ್ತು ಬೆಳಿಗ್ಗೆಯಿಂದ ಯು.ಹೊಸಳ್ಳಿ ಗ್ರಾಮದ ರಸ್ತೆಬದಿಯಲ್ಲೇ ಪೊದೆಯೊಂದರ ಬಳಿ ಸೇರಿಕೊಂಡು ಬಾಳೆ ತಿನ್ನುತ್ತಾ ನಿಂತಿರುವ ಒಂಟಿ ಸಲಗ ಬೆದರಿಸಿ ಓಡಿಸಲು ಹೋಗುವ ಅರಣ್ಯ ಸಿಬ್ಬಂಧಿ ಮತ್ತು ಗ್ರಾಮಸ್ಥರನ್ನೇ ಅಟ್ಟಿಸಿಕೊಂಡು ಬರುತ್ತಿದೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ರಸ್ತೆಯಲ್ಲಿ ವಾಹನಗಳು ಅತ್ತಿಂದಿತ್ತ ಓಡಾಡಲು ಆಗದೇ ಟ್ರಾಫಿಕ್ ಜಾಮ್ ಉಂಟಾಗಿದೆ. ಸಾಕಷ್ಟು ವಾಹನ ಮತ್ತು ಜನದಟ್ಟಣೆ ಉಂಟಾಗಿದೆ. ನಿಂತಲ್ಲಿಂದ ಕದಲದೇ ಕಾಡಾನೆ ಆತಂಕದ ವಾತಾರವಣ ಸೃಷ್ಟಿಸಿದೆ.
ಭೈರನ ಸೆರೆಹಿಡಿಯಲು ಆಗ್ರಹ
ಕೂಡಲೆ ಅರಣ್ಯ ಇಲಾಖೆ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿ ಜನರಿಗೆ ರಕ್ಷಣೆ ನೀಡಬೇಕು. ಇದೇ ಬೈರ ಆನೆ ಆಗಿರುವುದರಿಂದ ಇದರ ಚಲನವಲನ ಗಮನಿಸಿ ಸೆರೆಹಿಡಿಯಬೇಕು. ಈಗಾಗಲೇ ಕುಂದೂರು ಭಾಗದಲ್ಲಿ ಮೂರು ಕಾಡಾನೆ ಹಿಡಿಯುವ ಕಾರ್ಯಾಚರಣೆಗೆ ಆಗಮಿಸಿರುವ ತಂಡದಿಂದ ಈ ಆನೆಯನ್ನು ಸೆರೆಹಿಡಿಯಲು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಊರುಬಗೆಗೆ ವೈದ್ಯರ ತಂಡ ಕಳುಹಿಸಿದ್ದೇವೆ ; ಎಸಿಎಫ್
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ ಮೂಡಿಗೆರೆ ಎ.ಸಿ.ಎಫ್. ಡಾ. ರಾಜೇಶ್ ನಾಯ್ಕ್ ಅರಣ್ಯ ಸಿಬ್ಬಂದಿ ಮತ್ತು ವೈದ್ಯರ ತಂಡವೊಂದನ್ನು ಊರುಬಗೆಗೆ ಕಳುಹಿಸಿಕೊಡಲಾಗಿದೆ. ಅಲ್ಲಿರುವುದು ಬೈರ ಆನೆಯೇ ಎಂದು ಕಂಡುಬಂದರೆ ಮುಂದಿನ ಕಾರ್ಯಾಚರಣೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯ ಕುಂದೂರ ಭಾಗದಲ್ಲಿ ಕಾರ್ಯಾಚರಣೆ ತಂಡ ಕಾರ್ಯನಿರ್ವಹಿಸುತ್ತಿದ್ದು, ಪರಿಸ್ಥಿತಿ ನೋಡಿಕೊಂಡು ವೈದ್ಯರು ನೀಡುವ ಅಭಿಪ್ರಾಯವನ್ನು ಆದರಿಸಿ ಕ್ರಮ ವಹಿಸಲಾಗುವುದು ಎಂದಿದ್ದಾರೆ.