ಅಸ್ಸಾಂ ಮೂಲದ ಕಾರ್ಮಿಕರು ಕಳ್ಳತನ ದರೋಡೆಗೆ ಇಳಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ನವೆಂಬರ್ 11 ರಂದು ಗೋಣಿಬೀಡು ಠಾಣೆ ವ್ಯಾಪ್ತಿಯ ಮುದ್ರೆಮನೆಯ ಶರತ್ಗೌಡ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರು ಅಸ್ಸಾಂ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.
ಮುದ್ರೆಮನೆ ಶರತ್ಗೌಡ ಅವರು ಕುಟುಂಬಸಮೇತ ಹಾಸನಕ್ಕೆ ಹೋಗಿದ್ದರು. ಸಂಜೆ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಅವರು ಕಾರಿನಿಂದ ಇಳಿದು ಮನೆಗೆ ಹೋಗುವಾಗ ಮನೆಯಿಂದ ಕಳ್ಳರು ಹೋಗಿದ್ದರು. ಮನೆಯ ಬೀರುವಿನಲ್ಲಿದ್ದ 300 ಗ್ರಾಂ ಬೆಳ್ಳಿ ಒಡವೆಗಳು, 2 ಸಾವಿರ ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಗೋಣಿಬೀಡು ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ಬೆನ್ನತ್ತಿ ಹೋದ ಗೋಣಿಬೀಡು ಪೊಲೀಸರು ಆಲ್ದೂರಿನಲ್ಲಿ ಆರೋಪಿಗಳನ್ನು ಬಂಧಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ಸೋಮೇಗೌಡ, ಗೋಣಿಬೀಡು ಸಬ್ ಇನ್ಸ್ಪೆಕ್ಟರ್ ಧನಂಜಯ ಮತ್ತು ಪೊಲೀಸ್ ಸಿಬ್ಬಂದಿ ತಂಡ ಭಾಗವಹಿಸಿದ್ದರು.
ಬಂಧನದ ನಂತರ ಅವರ ವಿಚಾರಣೆ ನಡೆಸಿದಾಗ ಪೊಲೀಸರೇ ಬೆಚ್ಚಿಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ ಆಲ್ದೂರು ಸಮೀಪದ ಕೂದುವಳ್ಳಿ ಗ್ರಾಮದಲ್ಲಿ ಶೈಲಾ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದು ಇದೇ ತಂಡ ಎಂದು ತಿಳಿದುಬಂದಿದೆ. ಕೂದುವಳ್ಳಿ ಗ್ರಾಮದ ಶೈಲಾ ಎಂಬುವವರ ಮನೆಯಲ್ಲಿದ್ದ ಡಿಎಸ್ಎಲ್ಆರ್ ಕ್ಯಾಮೆರಾ, ಸ್ಮಾರ್ಟ್ ಪೋನ್ ಮತ್ತಿತರ ವಸ್ತುಗಳು ಕಳುವಾಗಿದ್ದ ಬಗ್ಗೆ ನವೆಂಬರ್ 11ರಂದು ಪ್ರಕರಣ ದಾಖಲಾಗಿತ್ತು. ಆಲ್ದೂರು ಪೊಲೀಸರು ಬಾಡಿ ವಾರಂಟ್ ಪಡೆದು ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.
ಅಸ್ಸಾಂ ಮೂಲದ ಕುರ್ಬನ್ ಆಲಿ, ನೂರ್ ಅಹಮದ್, ಸಫಿಕುಲ್ ಇಸ್ಲಾಂ ಬಂದಿತರು. ಈ ಮೂವರ ಗ್ಯಾಂಗ್ ಆಲ್ದೂರು ಸಮೀಪದ ಹುಣಸೆಹಳ್ಳಿ ಗ್ರಾಮದ ಕಾಫಿ ತೋಟದ ಲೈನಿನಲ್ಲಿ ಕಾರ್ಮಿಕರ ವೇಸದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಇವರು ಇಲ್ಲಿ ಕಳ್ಳತನ ಮಾಡಿ ಸೀದಾ ಅಸ್ಸಾಂಗೆ ತೆರಳುತ್ತಿದ್ದರು. ಮತ್ತೆ ಕೆಲ ತಿಂಗಳು ಬಿಟ್ಟು ಬಂದು ಮತ್ತೊಂದು ಕಳ್ಳತನ ಮಾಡುತ್ತಿದ್ದರು. ಬೀಗಹಾಕಿದ ಮನೆಗಳು, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಬೀಗ ಒಡೆದು ದರೋಡೆ ಮಾಡುತ್ತಿದ್ದರು.
ಮೂಡಿಗೆರೆಯಲ್ಲೂ ದರೋಡೆ ಮಾಡಿದ್ದರು : 2021ರ ನವೆಂಬರ್ 8ರಂದು ಮೂಡಿಗೆರೆಯಲ್ಲಿ ಸನ್ನಿಧಿ ಲೇಯೌಟ್ನಲ್ಲಿ ಗೋಣೀಬೀಡು ಮೆಡಿಕಲ್ ಮಾಲೀಕ ಅರವಿಂದ ಎಂಬುವವರ ಮನೆಯಲ್ಲಿ ಎರಡೂವರೆ ಲಕ್ಷ ಹಣವನ್ನು ದೋಚಿದ್ದು ಇದೇ ತಂಡ ಎಂದು ತಿಳಿದುಬಂದಿದೆ. ಅದೇ ಸಮಯದಲ್ಲಿ ಮೂಡಿಗೆರೆ ಮಾರ್ಕೆಟ್ ರಸ್ತೆಯಲ್ಲಿಯೂ ಒಂದು ಮನೆಯನ್ನುದರೋಡೆ ಮಾಡಿದ್ದರು.
ಬೆಳೆಗಾರರೇ ಎಚ್ಚರ : ಅಸ್ಸಾಂ ಮೂಲದ ಕಾರ್ಮಿಕರು ಮಲೆನಾಡಿನ ಕಾಫಿ ತೋಟಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸಗಾರರ ಸೋಗಿನಲ್ಲಿ ಇಂತಹ ಕೆಲವು ದರೋಡೆಕೋರರು ಸೇರಿಕೊಂಡಿರುತ್ತಾರೆ. ಇದರ ಬಗ್ಗೆ ತೋಟದ ಮಾಲೀಕರು ಎಚ್ಚರದಿಂದ ಇರಬೇಕು.
ಕೆಲ ದಿನಗಳ ಹಿಂದೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಬಿ.ಎಸ್. ಜಯರಾಂರವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ ಬೆಳೆಗಾರರನ್ನು ಎಚ್ಚರಿಸಿದ್ದರು. ಅವರು ತಮ್ಮ ಹೇಳಿಕೆಯಲ್ಲಿ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಬೆಳೆಗಾರ ಸಂಘದ ಮುಖಂಡರು ಮತ್ತು ಬೆಳೆಗಾರರ ಸಭೆ ಕರೆದು ವಲಸೆ ಕಾರ್ಮಿಕರ ಬಗ್ಗೆ ನಿಗಾ ಇಡುವಂತೆಯೂ ಹಾಗೂ ಅಸ್ಸಾಂ ಮೂಲದ ವಲಸೆ ಕಾರ್ಮಿಕರ ಭಾವಚಿತ್ರ, ಆಧಾರ್ ಕಾರ್ಡ್ ಮತ್ತು ಇನ್ನಿತರ ಅವಶ್ಯಕ ದಾಖಲಾತಿಗಳನ್ನು ಸಂಗ್ರಹಿಸಿ ಬುಕ್ಲೆಟ್ ತಯಾರಿಸಿ ಒಂದು ಬುಕ್ಲೆಟ್ನ್ನು ತಮ್ಮ ಬಳಿ ಇಟ್ಟುಕೊಂಡು, ಇನ್ನೊಂದು ಬುಕ್ಲೆಟ್ನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವಂತೆ ತಿಳಿಸಿರುತ್ತಾರೆ. ಬೆಳೆಗಾರರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುವುದು ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ವಲಸೆ ಕಾರ್ಮಿಕರಿಂದ ಸಂಕಷ್ಟಗಳು ಎದುರಿಸಬೇಕಾಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಎಲ್ಲಾ ಬೆಳೆಗಾರರು ತಮ್ಮ ತೋಟಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವಲಸೆ ಕಾರ್ಮಿಕರ ಮಾಹಿತಿ ಸಂಗ್ರಹಿಸಿ ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕೆಂದು ಬೆಳೆಗಾರರಲ್ಲಿ ಮನವಿ ಮಾಡಿರುತ್ತಾರೆ.