ಬೆಳಗಾರರ ಸಂಘದ ವತಿಯಿಂದ ಬೆಳೆಗಾರರ ವಿವಿಧ ಸಮಸ್ಯೆ ಬಗ್ಗೆ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮೂಡಿಗೆರೆ ಪಟ್ಟಣದ ಪ್ಲಾಂಟರ್ಸ್ ಕ್ಲಬ್ನಲ್ಲಿ ಇಂದು ಸಂಜೆ ಸಂವಾದ ಸಭೆ ನಡೆಯಿತು. ಸಭೆಯಲ್ಲಿ ಬೆಳೆಗಾರರ ಅನೇಕ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಮಾತನಾಡಿ, 10 ಎಕರೆ ಕೃಷಿ ಭೂಮಿಯನ್ನು ಗುತ್ತಿಗೆ ನೀಡಲು ಸರಕಾರ 2018ರಲ್ಲಿ ಹೊರಟಿತ್ತು. ಆದರೆ ಇದೂವರೆಗೂ ಕಾರ್ಯರೂಪಕ್ಕೆ ಬರಲಿಲ್ಲ. ಭೂಕಬಳಿಕೆ ಕಾಯಿದೆಯಿಂದ ಕೃಷಿ ಭೂಮಿ ಹೊರಗಿಡಬೇಕು. ಬಗರ್ ಹುಕುಂ ಸಾಗುವಳಿ ಚೀಟಿ ನೀಡಬೇಕು. ಕಸ್ತೂರಿರಂಗನ್ ವರದಿ ಜಾರಿ ಬಗ್ಗೆ 5 ನೋಟಿಫಿಕೇಷನ್ ಆಗಿದೆ. ಅದು ಅನುಷ್ಟಾನಗೊಳಿಸಬಾರದು. ಸರ್ಫೇಸಿ ಕಾಯಿದೆ ಕೈ ಬಿಡಬೇಕು. ಪಹಣಿಯಲ್ಲಿ ಬೆಳೆ ಕಾಲಂನಲ್ಲಿ ಇಲ್ಲಿ ಬೆಳೆಯುವ ಬೆಳೆ ನಮೂದು ಆಗಬೇಕು ಎಂದರು.
ಮೂಡಿಗೆರೆ ಬೆಳೆಗಾರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಡಾನೆ ಹಾವಳಿ ಮಿತಿ ಮೀರಿದೆ. ಸರಕಾರ ಮಾಡಿರುವ ಟಾಸ್ಕ್ಫೋರ್ಸ್ಗೆ ಕಾಡಾನೆ ಹಿಡಿಯಲು ಸ್ವತಂತ್ರ ಅಧಿಕಾರ ಕೊಡಬೇಕು. ಅಲ್ಲದೇ ಕೊಡಗಿನಂತೆ ತಾಲೂಕಿನಲ್ಲಿಯೇ ಆನೆ ಶಿಬಿರ ಮಾಡಬೇಕು, ಹಾಸನ, ಚಿಕ್ಕಮಗಳೂರು, ಕೊಡಗು ಈ ಮೂರು ಜಿಲ್ಲೆಯಲ್ಲಿ ಸುಮಾರು 150ಕ್ಕೂ ಅಧಿಕ ಕಾಡಾನೆಗಳಿದ್ದು, ಬೆಳೆನಷ್ಟ, ಸಾವು ಸಂಭವಿಸುತ್ತಲೇ ಇದೆ. ಇದಕ್ಕೆ ಶಾಶ್ಚತ ಪರಿಹಾರ ಹಾಗೂ ಇತರೇ ಅನೇಕ ಸಮಸ್ಯೆ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚಿಸಿ ಪರಿಹಾರ ಕಲ್ಪಿಸಬೇಕೆಂದು ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು.
ಬಳಿಕ ಡಿ.ಕೆ.ಶಿವಕುಮಾರ್ ಮಾತನಾಡಿ, ಬಯಲುಸೀಮೆ, ಮಲೆನಾಡಿನ ರೈತರಿಗೆ ವ್ಯತ್ಯಾಸವಿದೆ. ಶ್ರಮ ಒಂದೇ ಆಗಿದ್ದರೂ ಮಲೆನಾಡು ಭಾಗದ ಬೆಳೆಗಾರರನ್ನು ನೋಡುವ ದೃಷ್ಟಿಕೋನ ಬೇರೆಯಿದೆ. ಈ ದೃಷ್ಟಿಕೋನ ಬದಲಾಗಬೇಕು. ಅದಕ್ಕೆ ಅವಕಾಶ ಕೊಡುವುದಿಲ್ಲ. ಸರ್ಫೇಸಿ ಕಾಯಿದೆ ಬಗ್ಗೆ ಎಲ್ಲಿ ಯಾಮಾರಿದ್ದೇವೋ ಗೊತ್ತಿಲ್ಲ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರ ಬದುಕು ಸಂಕಷ್ಟಕ್ಕೀಡಾಗುತ್ತದೆ. ಯಾವುದೇ ಕಾಯಿದೆಗಳು ರೈತರಿಗೆ ಅನ್ಯಾಯವಾಗುತ್ತದೆಯೋ ಅದು ಜಾರಿಯಾಗಲು ಬಿಡುವುದಿಲ್ಲ. ಅದಕ್ಕೆ ನಮ್ಮ ಪಕ್ಷ ಆಡಳಿತಕ್ಕೆ ಬರುವಂತೆ ಅವಕಾಶ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್)ದ ಅಧ್ಯಕ್ಷ ಹೆಚ್.ಟಿ. ಮೋಹನ್ ಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, ಕಾರ್ಯಾಧ್ಯಕ್ಷ ದೃವನಾರಾಯಣ್, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವೆ ಮೋಟಮ್ಮ, ಹಳಸೆ ಶಿವಣ್ಣ, ಸಚಿನ್ ಮಿಗಾ, ಡಿ.ಎಸ್.ರಘು, ಜಿ.ಎಚ್.ಹಾಲಪ್ಪಗೌಡ ಸೇರಿದಂತೆ ಬೆಳೆಗಾರರು ಉಪಸ್ಥಿತರಿದ್ದರು.