ಮೂಡಿಗೆರೆ ತಾಲ್ಲೂಕು ಗೋಣಿಬೀಡು ಗ್ರಾಮದಲ್ಲಿರುವ ಜಾನುವಾರು ದೊಡ್ಡಿಯಲ್ಲಿ ಗೋವುಗಳ ಮೂಕ ರೋಧನ ಕೇಳುವವರಿಲ್ಲದಂತಾಗಿದೆ. ಇಲ್ಲಿನ ದೊಡ್ಡಿಯಲ್ಲಿ ಕೂಡಿ ಹಾಕಲ್ಪಡುವ ದನಗಳು ನೀರು ಮೇವು ಇಲ್ಲದೆ ಪರಿತಪಿಸುತ್ತವೆ. ಎಲ್ಲಾ ಕಡೆ ಜಾನುವಾರು ದೊಡ್ಡಿಗಳು ಮುಚ್ಚಿದ್ದರೂ ಗೋಣಿಬೀಡಿನಲ್ಲಿ ಮಾತ್ರ ಜಾನುವಾರು ದೊಡ್ಡಿ ಕಾರ್ಯನಿರ್ವಹಿಸುತ್ತಿದೆ.
ಗ್ರಾಮ ಪಂಚಾಯಿತಿ ಸುಪರ್ದಿಯಲ್ಲಿ ನಡೆಯುತ್ತಿರುವ ದೊಡ್ಡಿಯ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಯಾರು ದಿಕ್ಕಿಲ್ಲದ ಬಿಡಾಡಿ ದನಗಳು ಮೇವು ಅರಸಿಕೊಂಡು ಕಾಫಿ ತೋಟ, ಭತ್ತದ ಗದ್ದೆಗಳಿಗೆ ಹೋದಾಗ ಜಮೀನಿನ ಮಾಲೀಕರು ಅವುಗಳನ್ನು ಹಿಡಿದು ತಂದು ದೊಡ್ಡಿಗೆ ಕೂಡುತ್ತಾರೆ. ಅವುಗಳನ್ನು ಎಷ್ಟು ದಿನವಾದರೂ ಯಾರು ಬಿಡಿಸಿಕೊಂಡು ಹೋಗಲು ಬರುವುದಿಲ್ಲ. ಕೊನೆಗೆ ಗ್ರಾಮ ಪಂಚಾಯಿತಿಯವರು 12 ದಿನಗಳ ಕಾಲ ನೋಡಿ ಹರಾಜು ಹಾಕುತ್ತಾರೆ. ಕೆಲವೊಮ್ಮೆ ಹರಾಜು ಹಾಕಿದರೂ ಯಾರು ಅವುಗಳನ್ನು ಕೊಳ್ಳಲು ಬರುವುದಿಲ್ಲ.
ಅಲ್ಲಿ ಕೂಡಿ ಹಾಕಲ್ಪಟ್ಟ ಜಾನುವಾರುಗಳಿಗೆ ಸರಿಯಾಗಿ ಮೇಲು ಮತ್ತು ನೀರು ನೀಡುವುದಿಲ್ಲ. ಇದರಿಂದ ಅಲ್ಲಿನ ಗೋವುಗಳು ಹಸಿವು ನೀರಡಿಕೆಯಿಂದ ಬಳಲಿ ಅತೀವ ಸಂಕಟ ಅನುಭವಿಸುತ್ತವೆ. ಅವುಗಳ ದಯನೀಯ ಸ್ಥಿತಿಯನ್ನು ಕಂಡು ಸ್ಥಳೀಯರು ಮರುಗುವಂತಾಗಿದೆ.
ಗೋಹತ್ಯೆ ಕಾಯ್ದೆ ಜಾರಿಗೆ ಬಂದು ಗೋವುಗಳನ್ನು ಕದ್ದು ಸಾಗಿಸುವ ಕೃತ್ಯಕ್ಕೆ ಬ್ರೇಕ್ ಬಿದ್ದಿದೆ. ಇದರಿಂದ ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಿದೆ. ಅವುಗಳನ್ನು ಯಾರು ಮುತುವರ್ಜಿ ವಹಿಸುವವರು ಇಲ್ಲದಂತಾಗಿದೆ. ಹೊಟ್ಟೆಪಾಡಿಗಾಗಿ ತೋಟಗದ್ದೆಗೆ ಹೋದಾಗ ದೊಡ್ಡಿಗೆ ಸೇರುವ ದನಗಳ ಗೋಳು ಹೇಳತೀರದಾಗಿದೆ.
ಗೋಣಿಬೀಡು ದೊಡ್ಡಿಯಲ್ಲಿ ದನಗಳ ಸ್ಥಿತಿ ನೋಡಿದರೆ ಕರುಳು ಚುರ್ ಎನ್ನುತ್ತದೆ. ಮೇವು ನೀರು ಇಲ್ಲದೇ ಗೋವುಗಳು ಸಂಕಟಪಡುತ್ತಿವೆ. ಜಿಲ್ಲೆಯಲ್ಲಿ ಎಲ್ಲೂ ಇಲ್ಲದ ಜಾನುವಾರು ದೊಡ್ಡಿ ಗೋಣಿಬೀಡನಲ್ಲಿ ಮಾತ್ರ ಏಕಿದೆಯೋ ಗೊತ್ತಿಲ್ಲ. ಈ ದೊಡ್ಡಿಯನ್ನು ಮುಚ್ಚುವುದು ಒಳಿತು. ಯಾವ ಸಂಘಟನೆಗಳು, ಗ್ರಾಮ ಪಂಚಾಯತಿ ಸದಸ್ಯರು ಸಹ ಇತ್ತ ಗಮನಹರಿಸದಿರುವುದು ವಿಪರ್ಯಾಸ.
* ಸಂದೀಪ್ ಪಟೇಲ್, ಗೋಣಿಬೀಡು